ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದಲ್ಲಿ ಅತಿಥಿ ಉಪನ್ಯಾಸಕರು

ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದ ನೇರ ನೇಮಕಾತಿ ಆದೇಶ
Last Updated 9 ಜುಲೈ 2021, 3:17 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಉನ್ನತ ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರನ್ನು ಹಾಗೂ 310 ಪ್ರಾಚಾರ್ಯರರ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ಪರಿಗಣಿಸದೇ ನೇರ ನೇಮಕಾತಿ ಮಾಡಿಕೊಳ್ಳುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಇದರಿಂದ ಕಳೆದ 15-20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರು ವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ನೇಮಕಾತಿಗೆ ನಿಗದಿಪಡಿಸಿದ ವಯಸ್ಸನ್ನು ಮೀರಿದ್ದಾರೆ. ಅಂಥಹವರಿಗೆ ವಯಸ್ಸಿನ ಸಡಿಲಿಕೆಯನ್ನು ನೀಡಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರಿಗೆ ತೀವ್ರ ನಿರಾಸೆ ಉಂಟಾಗಿದೆ.

‘ಕೊರೊನಾ ಹರಡುವಿಕೆಯಿಂದ ಕೆಲಸ ಕಳೆದುಕೊಂಡು ಮೊದಲೇ ಸಂಕಷ್ಟದಲ್ಲಿ ಇರುವ ಉಪನ್ಯಾಸಕರಿಗೆ ಇದು ಇನ್ನೊಂದು ಹೊಡೆತ ನೀಡಲಿದೆ. ಹಾಗಾಗಿ ನೇಮಕಾತಿಯಲ್ಲಿ ಶೇ 50ರಷ್ಟು ಮೀಸಲಾತಿಯನ್ನು ಅತಿಥಿ ಉಪನ್ಯಾಸಕರಿಗೆ ನೀಡಬೇಕು’ ಎಂಬುವುದು ಬಹುತೇಕ ಅತಿಥಿ ಉಪನ್ಯಾಸಕರ ಬೇಡಿಕೆಯಾಗಿದೆ.

‘ಬಹುತೇಕ ಉಪನ್ಯಾಸಕರು ಪಿಎಚ್.ಡಿ, ಸೆಟ್ ಹಾಗೂ ನೆಟ್ ಪರೀಕ್ಷೆ ಪಾಸಾಗಿದ್ದು ಯು.ಜಿ.ಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿರು ವುದರಿಂದ ಕಾಯಂ ಗೊಳಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು’ ಎಂದು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅನಿಲಕುಮಾರ ಶಿಂಧೆ ಒತ್ತಾಯಿಸಿದ್ದಾರೆ.

‘ನೆಟ್‌, ಸೆಟ್‌, ಪಿಎಚ್‌.ಡಿ. ಮಾಡಿದ ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳು ₹20 ಸಾವಿರ, ಉಳಿದವರಿಗೆ ₹15 ಸಾವಿರ ವೇತನ ಇದೆ. ಕಡಿಮೆ ವೇತನ ಪಡೆಯುತ್ತಿದ್ದರೂ ಮುಂದಿನ ದಿನಗಳಲ್ಲಿ ಕೆಲಸ ಕಾಯಂಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಸ್ಥಳೀಯ ಅಭ್ಯರ್ಥಿ, ಗುತ್ತಿಗೆ ಆಧಾರ ಹಾಗೂ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಅವರ ಸೇವಾ ಅನುಭವ, ವಿದ್ಯಾರ್ಹತೆ ಪರಿಗಣಿಸಿ ಈ ಹಿಂದೆ ಕಾಯಂಗೊಳಿಸಿದ ಉದಾಹರ ಣೆಗಳಿವೆ. ಆದರೆ 2003ರಿಂದ ಇಲ್ಲಿವರೆಗೆ ಪ್ರತಿ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ’ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಮಹಿಳಾ ಪ್ರತಿನಿಧಿ ಡಾ.ಶಿವಲೀಲಾ ಮಠಪತಿ ಅವರು ಹೇಳಿದ್ದಾರೆ.

‘ಈಚೆಗೆ ಧಾರವಾಡದ ಉಚ್ಚ ನ್ಯಾಯಾಲಯ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಕುರಿತು ನಿಯಮಾನುಸಾರ 3 ತಿಂಗಳ ಒಳಗಾಗಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್‌ ಸದಸ್ಯರುಗಳ ಹಾಗೂ ಅತಿಥಿ ಉಪನ್ಯಾಸಕ ಪದಾಧಿಕಾರಿಗಳೊಂದಿಗೆ ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಹಂತ-ಹಂತವಾಗಿ ಕಾಯಂಗೊಳಿಸುವ ಭರವಸೆ ನೀಡಲಾಗಿದೆ. ಆದ್ದರಿಂದ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ವಯೋಮಿತಿ ಮೀರುತ್ತಿರುವ ಅರ್ಹತೆ ಮತ್ತು ಅನುಭವ ಹೊಂದಿದ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು’ ಎಂದು ಅತಿಥಿ ಉಪನ್ಯಾಸಕ ಶಿವಶಂಕರ ಬಾವಗೆ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT