ತೋಗಲೂರ (ಹುಲಸೂರ): ತಾಲ್ಲೂಕಿನತೋಗಲೂರ ಗ್ರಾಮದ ರೈತ ಓಂಕಾರ ಪಾಟೀಲ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಬಿತ್ತಿದ್ದ ಪಪ್ಪಾಯ ಸಸಿಗಳು ಮಳೆಯಿಂದಾಗಿ ಹಾನಿಗೀಡಾಗಿವೆ.
ಪಪ್ಪಾಯ ಬೆಳೆ ಬೆಳೆಯಲು ಅವರು ಇದುವರೆಗೂ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಪಪ್ಪಾಯ ಸಸಿಗಳನ್ನು ನಾಟಿ ಮಾಡಿದ ಗ್ರಾಮದ ಮೊದಲು ರೈತ ಇವರಾಗಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ಪಪ್ಪಾಯ ಸಸಿಗಳು ಉತ್ತಮವಾಗಿ ಬೆಳೆದು ನಿಂತಿದ್ದವು. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಕುಟುಂಬದ ಎಲ್ಲ ಸದಸ್ಯರು ಹೊಲದಲ್ಲಿ ದುಡಿಯುತ್ತಿದ್ದೆವು. ‘ಭಾರಿ ಮಳೆ ಹಾಗೂ ಗ್ರಾಮ ಸಮೀಪದ ಚುಳಕಿ ನಾಲಾದಿಂದ ನುಗ್ಗಿದ ನೀರಿನಿಂದಾಗಿ ಸಸಿಗಳು ನಾಶವಾಗಿವೆ’ ಎಂದು ರೈತ ಓಂಕಾರ ಪಾಟೀಲ ನೋವು ತೋಡಿಕೊಂಡರು.
‘ಪದವೀಧರ ಮಗನನ್ನು ನಗರಕ್ಕೆ ಕಳಿಸಿದ್ದರೆ ಉದ್ಯೋಗ ಮಾಡಿ ಹಣ ಕಳಿಸುತ್ತಿದ್ದ. ಕೃಷಿಯಲ್ಲೇ ತೊಡಗುವಂತೆ ನಾನು ಹೇಳಿದ್ದರಿಂದ ನಮ್ಮೊಂದಿಗೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ. ಇದೀಗ ಬೆಳೆ ನಾಶವಾಗಿ ದಿಕ್ಕುತೋಚದಂತಾಗಿದೆ’ ಎಂದು ಅವರು ಹೇಳಿದರು.