ಬೀದರ್: ‘ಜಿಲ್ಲೆಯಲ್ಲಿ ಸೌರ ವಿದ್ಯುತ್ ಪಾರ್ಕ್ ನಿರ್ಮಿಸಲು ಜಮೀನು ಗುರುತಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಚ್.ಆರ್ ಮಹಾದೇವ ಸೂಚಿಸಿದರು.
ಸೌರ ವಿದ್ಯುತ್ ಪಾರ್ಕ್ ನಿರ್ಮಾಣಕ್ಕೆ ಜಮೀನು ಗುರುತಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಎಲ್ಲಿ ಬರಡು ಭೂಮಿ ಇದೆ ಎನ್ನುವುದನ್ನು ಗುರುತಿಸಬೇಕು. ರೈತರೊಂದಿಗೆ ಸಭೆ ನಡೆಸಿ ಅವರ ಒಪ್ಪಿಗೆ ಪಡೆದ ನಂತರವೇ ಪಾರ್ಕ್ಗೆ ಜಮೀನು ನೀಡುವುದನ್ನು ಖಾತರಿಪಡಿಸಬೇಕು’ ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಕೆಆರ್ಇಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಬಸವರಾಜು ಮಾತನಾಡಿ, ‘ಸೌರ ವಿದ್ಯುತ್ ಪಾರ್ಕ್ ನಿರ್ಮಿಸಲು ಅಂದಾಜು 10 ಸಾವಿರ ಎಕರೆ ಜಮೀನನ್ನು 28 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗುವುದು. ಪ್ರತಿ ಎಕರೆಗೆ ವಾರ್ಷಿಕ ₹ 21,500 ಕೊಡಲಾಗುವುದು. ಎರಡು ವರ್ಷಕ್ಕೊಮ್ಮೆ ಗುತ್ತಿಗೆ ದರದಲ್ಲಿ ಶೇ 5 ರಷ್ಟು ಏರಿಕೆ ಮಾಡಲಾಗುವುದು’ ಎಂದು ತಿಳಿಸಿದರು.
‘ಪಾರ್ಕ್ ನಿರ್ಮಾಣ ಹಂತದಲ್ಲಿ ರೈತರು, ಅವರ ಕುಟುಂಬದ ಸದಸ್ಯರು, ನೇರ ಹಾಗೂ ಪ್ರತ್ಯಕ್ಷವಾಗಿ 8 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಪಾರ್ಕ್ ನಿರ್ಮಾಣದ ನಂತರ 12 ಸಾವಿರ ಹುದ್ದೆಗಳು ಸೃಷ್ಟಿಯಾಗಲಿವೆ’ ಎಂದು ಹೇಳಿದರು.
‘ಯೋಜನೆಗೆ ಒಂದೇ ಕಡೆ ಭೂಮಿ ನೀಡಲು ಆಸಕ್ತಿ ಇರುವ ರೈತರು ತಮ್ಮ ಒಪ್ಪಿಗೆಯನ್ನು ದಾಖಲೆಗಳೊಂದಿಗೆ ಲಿಖಿತವಾಗಿ ಕೆಆರ್ಇಡಿಸಿ ಅಥವಾ ಕೆಎಸ್ಪಿಡಿಸಿಎಲ್ಗೆ ಸಲ್ಲಿಸಬೇಕು’ ಎಂದು ತಿಳಿಸಿದರು.
ತಹಶೀಲ್ದಾರರಾದ ಚಂದ್ರಶೇಖರ ಎಂ., ಕೀರ್ತಿ ಚಾಲಕ್, ಸಾವಿತ್ರಿ ಸಲಗರ, ಅಣ್ಣಾರಾವ್ ಪಾಟೀಲ, ನಾಗಯ್ಯ ಹಿರೇಮಠ ಇದ್ದರು.