ಬೀದರ್: ಆರ್ಯ ಈಡಿಗ ಸಮಾಜದ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಆರ್ಯ ಈಡಿಗ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆರ್ಯ ಈಡಿಗ ಸಂಘ ಒತ್ತಾಯಿಸಿದೆ.
ಸಂಘದ ಜಿಲ್ಲಾ ಹಾಗೂ ಬೀದರ್ ತಾಲ್ಲೂಕು ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಮನವಿಪತ್ರವನ್ನು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಸಣ್ಣಪುಟ್ಟ ಜಾತಿಗಳ ಪ್ರಗತಿಗಾಗಿ ಅಭಿವೃದ್ಧಿ ನಿಗಮ ಹಾಗೂ ಪ್ರಾಧಿಕಾರಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ ಆರ್ಯ ಈಡಿಗ ಮತ್ತು ಇತರ ಉಪ ಜಾತಿಯ 80 ಲಕ್ಷ ಜನರಿದ್ದಾರೆ. ಮೂಲ ಕಸುಬು ಕಳೆದುಕೊಂಡು ಜೀವನ ನಡೆಸಲು ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸಮಾಜದ 8 ಜನ ಶಾಸಕರು ನಿಗಮ ಸ್ಥಾಪನೆಗೆ ಒತ್ತಡ ಹೇರುತ್ತ ಬಂದಿದ್ದಾರೆ. 15 ದಿನಗಳೊಳಗೆ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಯ್ಯ ಈಡಗಾರ, ಉಪಾಧ್ಯಕ್ಷ ಶ್ರೀಮಂತ ತೇಲಂಗ, ಖಜಾಂಚಿ ಅಶೋಕ ಗೌಡ, ಸದಸ್ಯರಾದ ಉಮೇಶ, ಶಿವಕುಮಾರ, ಕೃಷ್ಣಾ, ಅನರಾಜ ಮೂಂಗೆ, ಜೈಶೀಲಾ, ಸಿದ್ರಾಮ ಜ್ಯಾಂತೆ ಇದ್ದರು.