ಔರಾದ್: ಪಟ್ಟಣದ ಅಮರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶಾಲಿವಾನ ಉದಗಿರೆ ‘ಭಾರತೀಯ ಸೇನೆಯು ಜುಲೈ 26, 1999 ರಂದು ಪಾಕಿಸ್ತಾನವನ್ನು ಸೋಲಿಸಿತ್ತು. ಅಂದಿನಿಂದ ಭಾರತೀಯ ಪಡೆಗಳ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸಲು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ’ ಎಂದು ಹೇಳಿದರು.
‘ಎರಡು ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ ನಮ್ಮ ಅನೇಕ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡು ಭಾರತ ಭೂಮಿ ರಕ್ಷಣೆ ಮಾಡಿದ್ದಾರೆ. ಅವರ ಬಲಿದಾನ ಸದಾ ನಮಗೆ ಹೆಮ್ಮೆ ಹಾಗೂ ಪ್ರೇರಣೆ’ ಎಂದು ತಿಳಿಸಿದರು.
ಪ್ರಾಂಶುಪಾಲ ರೇವಣಯ್ಯ ಹಿರೇಮಠ ಮಾತನಾಡಿ ‘ಭಾರತೀಯ ಸೈನಿಕರ ಬಗ್ಗೆ ಪ್ರತಿಯೊಬ್ಬರಲ್ಲಿ ಗೌರವ ಅಭಿಮಾನ ಇರಬೇಕು. ನಾವೆಲ್ಲ ಸುರಕ್ಷಿತಗಾಗಿರಲು ನಮ್ಮ ಸೈನಿಕರ ಸೇವೆ ಮರೆಯಲಾಗದು. ದೇಶದ ಪ್ರಶ್ನೆ ಬಂದಾಗ ಪ್ರತಿ ಭಾರತೀಯ ಒಂದಾಗಬೇಕು’ ಎಂದು ಹೇಳಿದರು.
ಶಾಂತಕುಮಾರ ಸಂಗೋಳಗೆ ಮಾತನಾಡಿದರು. ಎಬಿವಿಪಿ ಪ್ರಮುಖ ಶಶಿಕಾಂತ, ಅಶೋಕ ಶೆಂಬೆಳ್ಳಿ, ಅಂಬಾದಾಸ ನೇಳಗೆ, ಅನಿಲ ಮೇತ್ರೆ, ಧನರಾಜ ಬಲ್ಲೂರ, ಮಲ್ಲಿಕಾರ್ಜುನ ಟೆಕರಾಜ ಇದ್ದರು.