ದಿಢೀರ್ ಕರೆದಿರುವ ಸಭೆಯಲ್ಲಿ ಬೀದರ್ ಜಿಲ್ಲೆಯ ಸಮಸ್ಯೆ ಮತ್ತು ಯೋಜನಗೆಗಳ ಬಗ್ಗೆ ಚರ್ಚಿಸಲು ಆಗುವುದಿಲ್ಲ. ಜಿಲ್ಲೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಬಜೆಟ್ನಲ್ಲಿ ಹಂಚಿಕೆ ಮಾಡಲಾದ ಹಣವೂ ಪೂರ್ಣ ವೆಚ್ಚವಾಗುತ್ತಿಲ್ಲ. ಜಿಲ್ಲೆಯ ಹಲವು ಯೋಜನೆಗಳಿಗೆ ತಾಂತ್ರಿಕ ಅನುಮೋದನೆ ದೊರೆತಿದ್ದರೂ ಆಡಳಿತಾತ್ಮಕ ಅನುಮೋದನೆ ದೊರೆಯಲು ವಿಳಂಬವಾಗುತ್ತಿದೆ. ಇದರ ಜತೆಗೆ ಹಲವು ಯೋಜನೆಗಳಿಗೆ ಡಿಪಿಆರ್ ಕೂಡ ಆಗುತ್ತಿಲ್ಲ. ಈ ಎಲ್ಲದರ ಬಗ್ಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಸುವ ತುರ್ತು ಅಗತ್ಯವಿದೆ ಎಂದಿದ್ದಾರೆ. ಜಿಲ್ಲೆಯ ಕಬ್ಬು ಬೆಳೆಗಾರ ಕೃಷಿಕರು ಕಬ್ಬಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಇದರ ಜತೆಗೆ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರಿಗೆ ಬಾಕಿ ಹಣ ದೊರೆತಿಲ್ಲ. ಸರ್ಕಾರದ ವತಿಯಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿಲ್ಲ. ಇದು ಹಿಂದುಳಿದ ಜಿಲ್ಲೆಯ ರೈತರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಜಿಲ್ಲೆಯ ಹಲವು ಕಡೆಗಳಲ್ಲಿ ತತ್ವಾರ ಆಗುತ್ತದೆ. ಕಳೆದ ಸಾಲಿನಲ್ಲಿ ಹೆಚ್ಚಿನ ಮಳೆ ಆಗಿದ್ದರೂ, ಸಮರ್ಪಕವಾಗಿ ಜಲಮೂಲ ನಿರ್ವಹಣೆ ಆಗದ ಕಾರಣ ಅಂತರ್ಜಲ ಮಟ್ಟವೂ ಹೆಚ್ಚಳವಾಗಿಲ್ಲ ಎಂದಿದ್ದಾರೆ.