ಬಸವಕಲ್ಯಾಣ: ಈ ಕ್ಷೇತ್ರದ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಆದಾಗಿನಿಂದ ಅಬಕಾರಿ ಇಲಾಖೆಯಿಂದ ಅಲ್ಲಲ್ಲಿ ದಾಳಿ ನಡೆಸಿ ಇದುವರೆಗೆ ಒಟ್ಟು ₹8 ಲಕ್ಷ ಮೌಲ್ಯದ ಅಬಕಾರಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಒಟ್ಟು 80 ದಾಳಿಗಳನ್ನು ನಡೆಸಿ 17 ಘೋರ ಹಾಗೂ 35 ಸೌಮ್ಯ ಪ್ರಕರಣಗಳನ್ನು ದಾಖಲಿಸಿ 26 ಆರೋಪಿಗಳನ್ನು ಬಂಧಿಸಲಾಗಿದೆ. 408.500 ಲೀಟರ್ ಮದ್ಯ 46.300 ಲೀಟರ್ ಬಿಯರ್ ಮತ್ತು ಇವುಗಳನ್ನು ಸಾಗಿಸುತ್ತಿದ್ದ 14 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಚುನಾವಣಾ ಅಕ್ರಮ ತಡೆಗೆ 3 ತಂಡಗಳನ್ನು ರಚಿಸಲಾಗಿದೆ. ಅಬಕಾರಿ ಅಕ್ರಮ ಕಂಡು ಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಸಾರ್ವಜನಿಕ ದೂರು ಹಾಗೂ ಮಾಹಿತಿಗಾಗಿ ಅಬಕಾರಿ ಭವನದ ಟೋಲ್ ಫ್ರೀ ಸಂಖ್ಯೆ 1800-425-1055 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.