ಜನವಾಡ: ಚರ್ಮ ಗಂಟು ರೋಗ ನಿರ್ವಹಣೆ ಪ್ರಯುಕ್ತ ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದಲ್ಲಿ ಜಾನುವಾರು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
250ಕ್ಕೂ ಹೆಚ್ಚು ಜಾನುವಾರುಗಳ ತಪಾಸಣೆ ನಡೆಸಿ, ರೋಗ ನಿರೋಧಕ ಚುಚ್ಚು ಮದ್ದು ಹಾಗೂ ಔಷಧಿ ನೀಡಲಾಯಿತು. ಚರ್ಮ ಗಂಟು ರೋಗ ಈಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಜಾನುವಾರು ಪಾಲಕರು ರೋಗದ ಮಾಹಿತಿ ಪಡೆದು ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಯರನಳ್ಳಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಕ ಪಾಟೀಲ ಸಲಹೆ ಮಾಡಿದರು.
ಚರ್ಮ ಗಂಟು ರೋಗಕ್ಕೆ ಯಾವುದೇ ಚಿಕಿತ್ಸೆ ಸದ್ಯ ಲಭ್ಯ ಇಲ್ಲ. ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಅಕ್ಷಯಕುಮಾರ ತಿಳಿಸಿದರು.
ಚರ್ಮ ಗಂಟು ರೋಗ ಬಾಧಿತ ಹಸು, ಎತ್ತುಗಳ ಮೈ ಮೇಲೆ ಗುಳ್ಳೆಗಳು/ಗಡ್ಡೆಗಳಂತೆ ಬಾವು ಕಾಣಿಸಿಕೊಂಡು ಕೆಲ ದಿನಗಳ ನಂತರ ಒಡೆದು ರಕ್ತ ಸೋರಲಾರಂಭಿಸುತ್ತದೆ ಎಂದು ಹೇಳಿದರು.
ಪಶು ಆಸ್ಪತ್ರೆಯ ಸಿಬ್ಬಂದಿ ಶೌಕತ್ ಅಲಿ, ರಾಜೇಂದ್ರ, ಕಲ್ಯಾಣಿ ರಾಠೋಡ್, ಗ್ರಾಮದ ಮುಖಂಡ ಓಂಕಾರ ಪಾಟೀಲ ಇದ್ದರು. ಕೃಷಿ ವಿಜ್ಞಾನ ಕೇಂದ್ರ ಮತ್ತು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.