ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಬೀದರ್‌: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು ಜನ ಹಕ್ಕು ಚಲಾವಣೆ ಮಾಡಿದ್ದಾರೆ.

ಭಾಲ್ಕಿ ಕ್ಷೇತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಪ್ರತಿನಿಧಿಸುತ್ತಾರೆ. ಅವರ ಮಗ ಸಾಗರ್‌ ಖಂಡ್ರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯೂ ಹೌದು. ಶೇ 70.05ರಷ್ಟು ಮತದಾನ ಭಾಲ್ಕಿಯಲ್ಲಾಗಿದ್ದು, ಈ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ ಸಿಗಲಿದೆ ಎಂಬ ಸಹಜ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇನ್ನು, ಭಾಲ್ಕಿ ನಂತರ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಮತದಾರರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಶೇ 69.80ರಷ್ಟು ಮತದಾನ ದಾಖಲಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಔರಾದ್‌, ಹುಮನಾಬಾದ್‌ ಕ್ಷೇತ್ರಗಳಿವೆ. ಕ್ರಮವಾಗಿ ಎರಡೂ ಕ್ಷೇತ್ರಗಳಲ್ಲಿ ಶೇ 66.94, ಶೇ 66.28ರಷ್ಟು ಜನ ಹಕ್ಕು ಚಲಾಯಿಸಿದ್ದಾರೆ.

ಇದಾದ ಬಳಿಕ ಬೀದರ್‌ ಕ್ಷೇತ್ರವಿದ್ದು, ಶೇ 65.30ರಷ್ಟು ಮತದಾನಕ್ಕೆ ಸಾಕ್ಷಿಯಾಗಿದೆ. ಬಸವಕಲ್ಯಾಣದಲ್ಲಿ ಶೇ 63.53ರಷ್ಟು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ 59.06ರಷ್ಟು ಮತದಾನ ದಾಖಲಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ ಶಾಸಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಸಲಹೆಗಾರ ಬಿ.ಆರ್‌. ಪಾಟೀಲ ಅವರು ಪ್ರತಿನಿಧಿಸುತ್ತಾರೆ.

ಗೆಲುವಿನ ಲೆಕ್ಕಾಚಾರ ಶುರು: ಮತದಾನ ಮುಗಿದ ಬೆನ್ನಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದರು. ಆದರೆ, ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿದೆ.

2019ರಲ್ಲಿ ನಡೆದ ಚುನಾವಣೆಯಲ್ಲಿ ಶೇ 62.58ರಷ್ಟು ಮತದಾನ ದಾಖಲಾಗಿತ್ತು. ಈಗ ಶೇ 65.45ರಷ್ಟು ದಾಖಲಾಗಿದ್ದು, ತುಸು ಹೆಚ್ಚಳ ಕಂಡಿದೆ.

ಅಧಿಕ ಮತದಾನ ನಡೆದಿರುವುದಕ್ಕೆ ಕಾಂಗ್ರೆಸ್‌ನವರು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಅವರ ವಿರೋಧಿ ಅಲೆಯೇ ಇದಕ್ಕೆ ಕಾರಣ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇನ್ನು, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹಿಂದಿನ ಸಲಕ್ಕಿಂತ ಈ ಸಲ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಈ ಸಲದ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಮೋದಿ ಅಲೆ ಇರಲಿಲ್ಲ. ಭಗವಂತ ಖೂಬಾ ಅವರು ಕಳೆದ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳು ಹಾಗೂ ಸಚಿವ ಈಶ್ವರ ಬಿ. ಖಂಡ್ರೆಯವರ ಮನೆತನದ ವರ್ಚಸ್ಸು, ಗ್ಯಾರಂಟಿಗಳ ನಡುವಿನ ಚುನಾವಣೆಯಾಗಿ ಬದಲಾಗಿತ್ತು. ಖೂಬಾ ಹಾಗೂ ಖಂಡ್ರೆಯವರಿಗೆ ಇದು ಪ್ರತಿಷ್ಠೆಯ ಚುನಾವಣೆ ಆಗಿದ್ದು, ಮತದಾರರು ಯಾರಿಗೆ ಆಶೀರ್ವದಿಸಿದ್ದಾರೆ ಎನ್ನುವುದನ್ನು ತಿಳಿಯಲು ಜೂನ್‌ 4ರ ವರೆಗೆ ಕಾಯಬೇಕು.

ಬೀದರ್‌ ಲೋಕಸಭೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ

ಕ್ಷೇತ್ರದ ಹೆಸರು; ಮತದಾನದ ಪ್ರಮಾಣ (ಶೇಕಡಾವಾರು) ಒಟ್ಟು ಮತದಾನ; 65.45 ಬೀದರ್‌; 65.30 ಬೀದರ್‌ ದಕ್ಷಿಣ; 69.80 ಬಸವಕಲ್ಯಾಣ; 63.53 ಭಾಲ್ಕಿ; 70.05 ಹುಮನಾಬಾದ್‌; 66.28 ಔರಾದ್‌; 66.94 ಆಳಂದ; 59.06 ಚಿಂಚೋಳಿ; 63.33 (ಮೂಲ: ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಬೀದರ್‌)

ಶಾಸಕ ಪ್ರಭು ಚವಾಣ್‌ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್‌

ಶಾಸಕ ಪ್ರಭು ಚವಾಣ್‌ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್‌

ಮತದಾನ ಮುಗಿದ ಬೆನ್ನಲ್ಲೇ ಸಕ್ರಿಯರಾದ ಪ್ರಭು ಚವಾಣ್‌
ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದ ಬೆನ್ನಲ್ಲೇ ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ಮತ್ತೆ ಸಕ್ರಿಯರಾಗಿದ್ದಾರೆ. ಸಾರ್ವಜನಿಕರ ಭೇಟಿಗೆ ಮುಂದಾಗಿದ್ದಾರೆ. ‘ಔರಾದ್‌ ತಾಲ್ಲೂಕಿನ ಬೋಂತಿ ತಾಂಡಾದ ಗೃಹ ಕಚೇರಿಯಲ್ಲಿ ಬುಧವಾರ (ಮೇ 8) ನಾನು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದೇನೆ’ ಎಂದು ಅವರ ಫೇಸ್‌ಬುಕ್‌ ಅಧಿಕೃತ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್‌ ನೀಡಬಾರದು ಎಂದು ಚವಾಣ್‌ ಪಟ್ಟು ಹಿಡಿದಿದ್ದರು. ಅನೇಕ ವೇದಿಕೆಗಳಲ್ಲಿ ಅದನ್ನು ವಿರೋಧಿಸಿದ್ದರು. ಆದರೆ ಹೈಕಮಾಂಡ್‌ ಖೂಬಾ ಅವರಿಗೆ ಟಿಕೆಟ್‌ ನೀಡಿತ್ತು. ಟಿಕೆಟ್‌ ಘೋಷಣೆಯಾದ ದಿನವೇ ಚವಾಣ್‌ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು. ‘ಕನಿಷ್ಠ ಎರಡರಿಂದ ಮೂರು ತಿಂಗಳು ವಿಶ್ರಾಂತಿ ಮಾಡಬೇಕೆಂದು ವೈದ್ಯರು ಸಲಹೆ ಮಾಡಿದ್ದು ಅವರು ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಅದರಂತೆ ಅವರು ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿರಲಿಲ್ಲ. ಆದರೆ ಮತದಾನ ಮುಗಿದ ಮರುದಿನವೇ ಅವರು ಸಾರ್ವಜನಿಕರ ಭೇಟಿಗೆ ಮುಂದಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಈ ಸಂಬಂಧ ಚವಾಣ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್‌ ಸ್ವಿಚ್‌ ಆಫ್‌ ಇತ್ತು.
ಅಭ್ಯರ್ಥಿಗಳು ‘ರಿಲ್ಯಾಕ್ಸ್‌’ ಮೂಡ್‌ನಲ್ಲಿ
ಜಿದ್ದಾಜಿದ್ದಿನ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ‘ರಿಲ್ಯಾಕ್ಸ್‌’ ಮೂಡ್‌ಗೆ ಜಾರಿದ್ದಾರೆ. ಕುಟುಂಬಸ್ಥರೊಂದಿಗೆ ಕೆಲಕಾಲ ಕಳೆದ ಇಬ್ಬರು ಮನೆಗೆ ಬಂದ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು ಬುಧವಾರ ಬೆಳಿಗ್ಗೆ ಅವರ ಭಾಲ್ಕಿಯ ಮನೆಯಲ್ಲಿ ಯೋಗ ಪ್ರಾಣಾಯಾಮ ಮಾಡಿದರು. ಮನೆಯಲ್ಲಿ ಬೆಳಗಿನ ಉಪಾಹಾರ ಮುಗಿಸಿಕೊಂಡು ಆನಂತರ ಬಿಕೆಐಟಿ ಕಾಲೇಜಿಗೆ ತೆರಳಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಯಾಗಿರುವ ಅವರು ಹಲವು ದಿನಗಳ ಬಳಿಕ ಕಾಲೇಜಿನಲ್ಲಿ ಕಾಣಿಸಿದರು. ಮಧ್ಯಾಹ್ನ ಊಟ ಮುಗಿಸಿಕೊಂಡು ಕಾರ್ಯಕರ್ತರೊಂದಿಗೆ ಭೇಟಿಯಾದರು. ‘ಮೇ 10ರ ವರೆಗೆ ಸ್ಥಳೀಯವಾಗಿಯೇ ಇರುತ್ತೇನೆ. ಆನಂತರ ಕೆಲಸದ ಅಂಗವಾಗಿ ಜಿಲ್ಲೆಯ ಹೊರಗೆ ಹೋಗುತ್ತಿರುವೆ’ ಎಂದು ಸಾಗರ್‌ ಖಂಡ್ರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸಹ ಬುಧವಾರ ಮನೆಯಲ್ಲಿಯೇ ಇದ್ದರು. ಬೆಳಗಿನ ಕರ್ಮಗಳನ್ನು ಮುಗಿಸಿ ಕೆಲಕಾಲ ಯೋಗ ಮಾಡಿದರು. ಆನಂತರ ತಮ್ಮ ಹಿತೈಶಿಗಳು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರು ಕರೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT