ಚಿಟಗುಪ್ಪ: ‘ಸಂಘ, ಸಂಸ್ಥೆಗಳ ಸಮಾಜಮುಖಿ ಸೇವೆಯಿಂದ ದೇಶದ ಪ್ರಗತಿ ಸಾಧ್ಯ’ ಎಂದು ಸೇಡಂ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಅವರು ಅಭಿಪ್ರಾಯಪಟ್ಟರು.
ಇಲ್ಲಿಯ ಗಣೇಶ ಮಂದಿರದ ಆವರಣದಲ್ಲಿ ಗಜಾನನ ಡೌಲಪರ್ಸ್ ವತಿಯಿಂದ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,‘ಉದ್ಯಮಿ ಸಮೂಹ, ಯುವಕರು, ಉಳ್ಳವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ನಾಗರಿಕರನ್ನು ಪ್ರೋತ್ಸಾಹಿಸಿ ಮೇಲೆತ್ತುವ ಕಾರ್ಯ ಮಾಡಬೇಕು’ ಎಂದರು.
ಪುರಸಭೆ ಮಾಜಿ ಸದಸ್ಯ ರಾಜಕುಮಾರ ಗುತ್ತೇದಾರ, ಗಣ್ಯರಾದ ಸಂಜು ಗಂಜಿ, ಮಾರುತಿ ಮರಾಠ, ರಮೇಶ ಪಾರಾ, ಶೀಲವಂತ ನಾಗೇಶ, ದೀಪಕ ಪಂಚಾಳ್ ಹಾಗೂ ಇತರರು ಇದ್ದರು. ಗಣೇಶ ದೇಗುಲದ ಅಧ್ಯಕ್ಷ ವೀರಣ್ಣ ಜಟ್ಲಾ ಸ್ವಾಗತಿಸಿದರು.
ನಂತರ ದೇಗುಲದಲ್ಲಿ ದೇವರಿಗೆ ಯುಗಾದಿಯ ವಿಶೇಷ ಪೂಜೆ, ಫಲ ಪುಷ್ಪಗಳ ಅರ್ಪಣೆ, ಕಾಯಿ ಕರ್ಪೂರ ಅರ್ಪಿಸಿ ಮಹಾಮಂಗಳಾರತಿ ಬೆಳಗಲಾಯಿತು.