ಜನವಾಡ: ಗಣಿತ ಕಬ್ಬಿಣದ ಕಡಲೆಯಲ್ಲ. ಅರ್ಥ ಮಾಡಿಕೊಂಡರೆ ಅದರಷ್ಟು ಆಸಕ್ತಿದಾಯಕ ವಿಷಯ ಮತ್ತೊಂದಿಲ್ಲ. ಗಣಿತ ನಮಗೆ ಜೀವನದ ಕ್ಲಿಷ್ಟ ಸಮಸ್ಯೆ ಎದುರಿಸುವ ಕಲೆ ಕಲಿಸುತ್ತದೆ. ಗಣಿತದ ಜ್ಞಾನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ನುಡಿದರು.
ಬೀದರ್ ತಾಲ್ಲೂಕಿನ ಬಗದಲ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಇಂದು ಸರ್ಕಾರದ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಈ ಶಾಲೆಗಳ ಕೊಡುಗೆ ಅನನ್ಯ ಎಂದು ಹೇಳಿದರು.
ಮಂಜುನಾಥ ಬಂಬುಳಗೆ ಮಾತನಾಡಿ, ರಾಮಾನುಜನ್ ಅವರ ಸಮರ್ಪಣಾ ಭಾವದ ಆದರ್ಶ ಬದುಕು ಇಂದಿನ ಮಕ್ಕಳಿಗೆ ಆದರ್ಶವಾಗಬೇಕಿದೆ. ಗಣಿತವೊಂದನ್ನೇ ಉಸಿರಾಡಿದ್ದ ರಾಮಾನುಜನ್ ಎಂದಿಗೂ ಅಧ್ಯಯನ ಯೋಗ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಮಠಾಣದ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ ತಿಪ್ಪಣ್ಣ ಚಿಂತಾಲೆ ಮಾತನಾಡಿ, ಲೆಕ್ಕ ಬಲ್ಲವ ಜೀವನ ಗೆಲ್ಲುತ್ತಾನೆ. ಲೆಕ್ಕ ಬಾರದ ವ್ಯಕ್ತಿ ಬದುಕು ನಿರ್ವಹಣೆ ಮಾಡುವಲ್ಲಿ ಸೋಲುತ್ತಾನೆ. ಲೆಕ್ಕದ ಬದುಕು ನಮ್ಮದಾಗಲಿ ಎಂದರು.
ರಾಂಪುರೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶ ರಾಂಪುರೆ, ನಿರ್ಣಾದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಪ್ರಾಚಾರ್ಯ ವಿಜಯಕುಮಾರ ಅಕ್ಕಣ್ಣ, ಗಣಿತ ಸಂಪನ್ಮೂಲ ಶಿಕ್ಷಕಿ ಸುಲೋಚನಾ ಸಾತೋಳಿಕರ್ ಮಾತನಾಡಿದರು. ಪ್ರಾಚಾರ್ಯ ಚೆನ್ನಬಸವ ಹೇಡೆ ಅಧ್ಯಕ್ಷತೆ ವಹಿಸಿದ್ದರು.
ಶ್ರುತಿ ಮತ್ತು ಆರತಿ ನಿರೂಪಿಸಿದರು. ಬಿಂದುರೆಡ್ಡಿ ಸ್ವಾಗತಿಸಿದರು. ಅಂಕಿತಾ ಸಿದ್ದಾರೆಡ್ಡಿ ವಂದಿಸಿದರು. ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಗಣಿತ ಮಾದರಿ ಪ್ರದರ್ಶನದಲ್ಲಿ ವಿಜೇತರಿಗೆ ಪುರಸ್ಕಾರ ನೀಡಲಾಯಿತು.