ಭಾಲ್ಕಿ: ‘ಪ್ರತಿನಿತ್ಯ ಶರಣರು ಧರಿಸುವ ವಿಭೂತಿಯಲ್ಲಿ ರೋಗಾಣು ಕೊಲ್ಲುವ ಶಕ್ತಿ ಇದೆ. ಆದ್ದರಿಂದ ಅದನ್ನು ಜಾತಿ, ಲಿಂಗ, ವರ್ಣಭೇದವಿಲ್ಲದೆ ಎಲ್ಲರೂ ಹಣೆಯ ಮೇಲೆ ಧರಿಸಿಕೊಳ್ಳಬಹುದು’ ಎಂದು ಗೋರಚಿಂಚೋಳಿಯ ಸಿದ್ಧರಾಮೇಶ್ವರ ಮಠದ ಪೀಠಾಧಿಪತಿ ಸಿದ್ಧರಾಮೇಶ್ವರ ಪಟ್ಟದ್ದೇವರು ಹೇಳಿದರು.
ಇಲ್ಲಿಯ ಸಂಜೀವಕುಮಾರ ಬಿರಾದಾರ ಅವರ ಮನೆಯಲ್ಲಿ ನಡೆದ ‘ಮನೆಯಂಗಳದಲ್ಲಿ ಸಂಸ್ಕಾರದ ಬೆಳಕು’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಭೂತಿಯನ್ನು ದೇಹದ ಅಂಗಾಂಗಗಳಿಗೆ ಧರಿಸುವ ಅಭ್ಯಾಸ ಸಾವಿರಾರು ವರ್ಷಗಳಿಂದ ಇದೆ. ಋಷಿ ಮುನಿಗಳು, ಸನ್ಯಾಸಿಗಳು, ಸಾಧು ಸಂತರು ಸೇರಿ ಶರಣ ಜೀವಿಗಳು ಧರಿಸುತ್ತಾರೆ ಎಂದರು.
ಸದಾಕಾಲ ವಿಭೂತಿಯನ್ನು ಹಣೆ ಮೇಲೆ ಧರಿಸುವುದರಿಂದ ದುಷ್ಟಶಕ್ತಿಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು. ಮುಖದಲ್ಲಿ ಚಿತ್ಕಳೆ ವೃದ್ಧಿಯಾಗುತ್ತದೆ. ವಿಭೂತಿ ಧಾರಣೆಯಿಂದ ಶರೀರ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸು ಶಾಂತಿಯ ಕಡೆ ವಾಲುತ್ತದೆ. ಜ್ಞಾನನೇತ್ರ ಪಡೆಯಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕ ಉದಾಹರಣೆ ಸಹಿತ ವಿವರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಶಂಕೆ ಹಾಗೂ ಪ್ರಮುಖರಾದ ಪ್ರಕಾಶ ಬಿರಾದಾರ ಮಾತನಾಡಿದರು.
ಪತ್ರಕರ್ತ ಬಸವರಾಜ ಪ್ರಭಾ, ಸಂಜೀವಕುಮಾರ ಬಿರಾದಾರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಪ್ರಮುಖರಾದ ಅಶೋಕ ಭಂಡಾರಿ, ಚೇತನ ಬಿರಾದಾರ, ಶಾಲಿವಾನ ಬಿರಾದಾರ, ಅಶೋಕ ಲದ್ದೆ, ಕಾರ್ತಿಕ ಸ್ವಾಮಿ, ಸಾಯಿಕುಮಾರ ದಾನಾ ಇದ್ದರು.