ಬೀದರ್: ಆಝಾದಿ ಕಾ ಅಮೃತ ಮಹೋತ್ಸವ ಯುವಕ ಸಂಘವು ಇಲ್ಲಿಯ ಶಿವನಗರ ಸಮೀಪದ ಪಾದಚಾರಿ ಮಾರ್ಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ತಾಯಿ ಭಾರತಿಗೆ ಸಂಗೀತದಾರತಿ ಕಾರ್ಯಕ್ರಮದಲ್ಲಿ ಕಲಾವಿದರು ಭಾರತ ಮಾತೆಗೆ ಸಂಗೀತ ಅರ್ಪಿಸಿದರು.
ಕಲಾವಿದರು ಜಿಟಿ ಜಿಟಿ ಮಳೆಯಲ್ಲೂ ದೇಶ ಭಕ್ತಿ ಗೀತೆಗಳ ಸುರಿಮಳೆ ಸುರಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಕಿಂಚಿತ್ತೂ ಕದಲದೆ, ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಘೋಷಣೆ ಕೂಗಿ ದೇಶಾಭಿಮಾನ ಮೆರೆದರು. ಸಂಗೀತದ ತಾಳಕ್ಕೆ ಹೆಜ್ಜೆ ಕೂಡ ಹಾಕಿದರು.
ಶಿವಲೀಲಾ ಚಿದ್ರೆ ಅವರ ವಂದೇ ಮಾತರಂ ಗೀತೆಯೊಂದಿಗೆ ದೇಶ ಭಕ್ತಿ ಗೀತೆಗಳ ಗಾಯನ ಆರಂಭಗೊಂಡಿತು. ಪದ್ಮಜಾ ಫಬ್ಬಾ, ಭವಾನಿ, ಶಿವಾನಿ ಸ್ವಾಮಿ, ಸೌಮ್ಯಶ್ರೀ, ಡಾ. ಲೋಕೇಶ ಹಿರೇಮಠ, ಮಹೇಶ್ವರಿ ಪಂಚಾಳ ಮೊದಲಾದವರು ಸುಮಧುರವಾಗಿ ಹಾಡಿ ನೆರೆದವರು ತಲೆದೂಗುವಂತೆ ಮಾಡಿದರು.
‘ಎ ಮೇರೆ ವತನ್ ಕೇ ಲೋಗೊ’, ‘ಯೇ ಮೇರಾ ಇಂಡಿಯಾ’, ‘ಹರ್ ಕರಮ್ ಅಪ್ನಾ ಕರೆಂಗೆ ಯೇ ವತನ್ ತೇರೆ ಲಿಯೆ’, ‘ಎ ದೇಶ ಹೈ ವೀರ ಜವಾನೋಕಾ’, ‘ಹೊಟೋಪೆ ಸಚ್ಚಾಯಿ ರಹತಿ ಹೈ’, ಎ ಮೇರೆ ಪ್ಯಾರೆ ವತನ್ ಗೀತೆಗಳು ದೇಶಾಭಿಮಾನ ಉಕ್ಕಿಸಿದವು. ಮಕ್ಕಳು, ಯುವಕರು, ನಿವೃತ್ತ ನೌಕರರು, ಹಿರಿಯ ನಾಗರಿಕರಿಂದ ಭಾರತ ಮಾತೆಯ ಜಯಘೋಷ ಮೊಳಗಿದವು.
ಶ್ರೇಯಾ ಚಿದ್ರೆ, ಸ್ಫೂರ್ತಿ ಅಳ್ಳೆ, ಅನುಷ್ಕಾ ನಾಗೂರೆ, ತನ್ವಿ ಬಿರಾದಾರ, ತನ್ಮಯ, ವೇದಾಂಶ ಹಲ್ಮಂಡಗೆ ಮತ್ತು ತಂಡದವರು ದೇಶ ಭಕ್ತಿ ಗೀತೆ ಸಂಗೀತಕ್ಕೆ ತಕ್ಕಂತೆ ನೃತ್ಯ ಪ್ರಸ್ತುತಪಡಿಸಿದರು. ಶೌರ್ಯ ಶ್ರೀಕಾಂತ ಮೋದಿ ಸ್ವಾತಂತ್ರ್ಯದ ಕುರಿತು ಮಾತನಾಡಿದರು.
1947 ರ ಆಗಸ್ಟ್ 15 ರಂದು ಜನಿಸಿದ ಕ್ರಾಂತಿಬಾಯಿ ಸುಭಾಷ್ ಮೆಹ್ತಾ, ರಾಜ್ಯಮಟ್ಟದ ಜಾನಪದ ಪ್ರಶಸ್ತಿ ಪುರಸ್ಕೃತ ಶಿವಾನಿ ಮಠಪತಿ ಹಾಗೂ ಮಾಜಿ ಸೈನಿಕ ಮಲ್ಲಿಕಾರ್ಜುನ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿ.ಪಂ. ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಲುಂಬಿಣಿ ಗೌತಮ, ಮುಖಂಡರಾದ ಗುರುನಾಥ ಜ್ಯಾಂತಿಕರ್, ಬಾಬುರಾವ್ ಕಾರಬಾರಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಕಾಶ ಟೊಣ್ಣೆ, ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ, ಕಾರ್ಯಕ್ರಮದ ರೂವಾರಿ ಶ್ರೀಕಾಂತ ಮೋದಿ, ರುಚಿಕಾ ಶಾ, ರಶ್ಮಿ, ಸೌರಭ್ ಮತ್ತಿತರರು ಇದ್ದರು.
ಮನ್ಮಥ ಕಾಡವಾದ ಸ್ವಾಗತಿಸಿದರು. ಸತ್ಯಪ್ರಕಾಶ ನಿರೂಪಿಸಿದರು. ಸಚ್ಚಿದಾನಂದ ಚಿದ್ರೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.