ಬಸವಕಲ್ಯಾಣ (ಬೀದರ್ ಜಿಲ್ಲೆ): ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರದ ಲೋಕೇಶ ಮೋಳಕೆರೆ ಅವರು ಎಂಎಸ್ಡಬ್ಲೂ ಪದವೀಧರರು. ಮೊದಲಿನಿಂದಲೂ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕೋವಿಡ್ ಲಾಕ್ಡೌನ್ನಲ್ಲಿ ಸಂಬಂಧಿಕರು ಸಮೀಪಕ್ಕೆ ಬಾರದವರ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸೇವೆಗೆ ಇಳಿದರು. ಅಲ್ಲದೇ, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಆಹಾರದ ಪೊಟ್ಟಣ ವಿತರಿಸಿದರು.
ಮಾನಸಿಕ ಅಸ್ವಸ್ಥರ ಕ್ಷೌರ ಹಾಗೂ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. 10 ಮಂದಿ ಯುವಕರ ತಂಡ ಕಟ್ಟಿಕೊಂಡು ಎರಡು ತಿಂಗಳಿನಿಂದ ಪ್ರತಿದಿನ ಬಸವಕಲ್ಯಾಣದಲ್ಲಿ ನಿರ್ಗತಿಕರಿಗೆ ಸಂಜೆ ಒಂದು ಹೊತ್ತಿನ ಊಟ ಪೂರೈಸುತ್ತಿದ್ದಾರೆ. ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ಸ್ವತಃ ಅಡುಗೆ ಸಿದ್ಧಪಡಿಸಿ ಭಿಕ್ಷುಕರು ಇರುವಲ್ಲಿಗೆ ಹೋಗಿ ಊಟ ವಿತರಿಸುತ್ತಾರೆ.
ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ನಗರದ ಅನೇಕ ಕಡೆ ಸಸಿಗಳನ್ನು ನೆಟ್ಟಿದ್ದಾರೆ. ಶಾಲೆಗಳ ಆವರಣದಲ್ಲಿ ಕಸ–ಕಂಟಿ ಬೆಳೆದಾಗ ಸ್ವಚ್ಛಗೊಳಿಸುವ ಕಾಯಕ ರೂಢಿಸಿಕೊಂಡಿದ್ದಾರೆ. ಸುಣ್ಣಬಣ್ಣ ಬಳಿದು ಶಾಲೆಯ ಅಂದ ಹೆಚ್ಚುವಂತೆ ಮಾಡಿದ್ದಾರೆ.
ಅವರ ಸಮಾಜ ಸೇವೆಗೆ ಉತ್ತೇಜನ ನೀಡಲು ಜ್ಞಾನೇಶ್ವರ ರಾಚಪ್ಪನೋರ್, ರಾಹುಲ್ ಶಾಶೆಟ್ಟೆ, ನಾಗೇಶ ಬಾವಗೆ, ಆಕಾಶ ಮುತ್ತೆ, ಪ್ರಶಾಂತ ಅಂಬಾಡೆ, ಶಿವಶಂಕರ ಕಾಮಣ್ಣ, ಪ್ರವೀಣ ಬಿರಾದಾರ, ಚೇತನ್ ಹಿರೋಳೆ, ಅಂಬರೀಶ ಕೋರಾಳೆ ಬೆಂಬಲಕ್ಕೆ ನಿಂತಿದ್ದಾರೆ.