ಜನವಾಡ: ‘ಮಹಾ ತಪಸ್ವಿ ಆಗಿದ್ದ ಶರಣ ವೀರಭದ್ರಪ್ಪ ಅವರು ದೇವರನ್ನು ಒಲಿಸಿಕೊಂಡಿದ್ದರು’ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಅವರು ಹೇಳಿದರು.
ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಶರಣ ವೀರಭದ್ರಪ್ಪ ಅಪ್ಪ ಅವರ 75ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಭದ್ರಪ್ಪ ಅವರ ಹೃದಯ ನಿರ್ಮಲವಾದದ್ದೇ ಅವರು ದೇವರ ಕೃಪೆಗೆ ಪಾತ್ರರಾಗಲು ಕಾರಣವಾಗಿತ್ತು ಎಂದು ಹೇಳಿದರು.
ದಾಸೋಹಕ್ಕೆ ಹೆಸರಾಗಿದ್ದರು. ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಮನ ಪರಿವರ್ತನೆ ಮಾಡುತ್ತಿದ್ದರು. ಭಕ್ತರ ಉದ್ಧಾರವೇ ಅವರ ಧ್ಯೇಯವಾಗಿತ್ತು ಎಂದು ತಿಳಿಸಿದರು.
ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ದೇವರ ಕೃಪೆಗೆ ಪಾತ್ರರಾಗಲು ನಿತ್ಯ ಲಿಂಗಪೂಜೆ ಮಾಡಬೇಕು ಎಂದು ಅವರು ಹೇಳಿದರು.
ಮಹಾತ್ಮರ ಜೀವನ ಚರಿತ್ರೆ ಓದಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಜಗತ್ತು ತೋರಿಸಿದ ತಂದೆ-ತಾಯಿಯ ಸೇವೆ ಮಾಡಬೇಕು. ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಸಂಗಮೇಶ ಪಾಟೀಲ, ದೀಪಕ್ ಗಾದಗೆ, ಮಾಣಿಕಪ್ಪ ಖಂಡ್ರೆ, ಮನೋಹರ ಬಾಬಶೆಟ್ಟಿ, ಶಿವಾನಂದ ಮಡಿವಾಳ, ರತೀಶ್ ಬೀರನಳ್ಳೆ, ಓಂಕಾರ ಬಾಬಶೆಟ್ಟಿ, ಜಗನ್ನಾಥ ರಿಕ್ಕೆ, ಬಸವ ಕುಂಬಾರ ಮೊದಲಾದವರು ಈ ವೇಳೆ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಬಸವಲಿಂಗ ಅವಧೂತರು ಶರಣ ವೀರಭದ್ರಪ್ಪ ಅವರ ಮೂರ್ತಿಗೆ ಪೂಜೆ ಸಲ್ಲಿಸಿದರು.