ಬಸವಕಲ್ಯಾಣ: ‘ಜ್ಞಾನಿಗಳ ಸೃಷ್ಟಿ ಅನುಭವ ಮಂಟಪದ ಉದ್ದೇಶವಾಗಿತ್ತು. ಜ್ಞಾನಾಧಾರಿತ ಭಕ್ತಿಯಿಂದ ಜೀವನ ಪಾವನಗೊಳ್ಳುತ್ತದೆ’ ಎಂದು ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಹೇಳಿದರು.
ನಗರದ ಶರಣ ಹರಳಯ್ಯ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದಿಂದ ಮಂಗಳವಾರ ನಡೆದ ಎರಡನೇ ದಿನದ ಶರಣ ವಿಜಯೋತ್ಸವದ ‘ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ವೈಚಾರಿಕತೆ ಬೆಳೆಸಿಕೊಳ್ಳಬೇಕು. ಪ್ರಗತಿಪರರಾದರೆ ಮಾತ್ರ ಜೀವನ ಪರಿಪೂರ್ಣಗೊಳ್ಳುತ್ತದೆ. ಸತ್ಯಶುದ್ಧ ಕಾಯಕ, ದಾಸೋಹ ಕೈಗೊಳ್ಳಬೇಕು. ಸಕಲ ಜೀವಾತ್ಮರಿಗೆ ಲೇಸು ಬಯಸುವಂತಾಗಬೇಕು. 770 ಅಮರಗಣಂಗಳಿಂದ ಕೂಡಿದ್ದ ಬಸವಣ್ಣನವರ ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು ಎನ್ನುವುದಕ್ಕೆ ಅನೇಕ ಸಾಕ್ಷಾಧಾರಗಳಿವೆ’ ಎಂದರು.
ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ,‘ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ಬಸವತತ್ವದ ಆಚರಣೆಯಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ’ ಎಂದರು.
ಉದ್ಯಮಿ ಧನರಾಜ ತಾಳಂಪಳ್ಳಿ ಮಾತನಾಡಿ,‘ಶರಣ ತತ್ವದ ಪ್ರಸಾರಕ್ಕಾಗಿ ಅನುಭವ ಮಂಟಪ ಅಗತ್ಯವಾಗಿದೆ. ಆದ್ದರಿಂದ ಸರ್ಕಾರ ನೂತನ ಮಂಟಪ ನಿರ್ಮಿಸುತ್ತಿರುವುದು ಸಂತಸ ತಂದಿದೆ’ ಎಂದರು.
ಶರಣ ಹರಳಯ್ಯ ಪೀಠಾಧ್ಯಕ್ಷೆ ಡಾ.ಗಂಗಾಂಬಿಕಾ ಅಕ್ಕ, ಡಾ.ಜಿ.ಎಸ್.ಭುರಳೆ, ವಕೀಲರ ಸಂಘದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ಸುಭಾಷ ಹೊಳಕುಂದೆ, ಬಸವರಾಜ ಕೋರಕೆ, ಮಲ್ಲಿಕಾರ್ಜುನ ಚಿರಡೆ, ರವಿ ಕೊಳಕೂರ, ಡಾ.ರುದ್ರಮಣಿ ಮಠಪತಿ, ಬಸವರಾಜ ಖಂಡಾಳೆ ಹಾಗೂ ಜಗನ್ನಾಥ ಕನಶೆಟ್ಟೆ ಇದ್ದರು.
ಉದ್ಘಾಟನೆ: ಇದಕ್ಕೂ ಮೊದಲು ಔಸಾ ಗುರುಬಾಬಾ ಮಹಾರಾಜ ಶರಣ ವಿಜಯೋತ್ಸವ ಉದ್ಘಾಟಿಸಿದರು. ಶಾಸಕ ಶರಣು ಸಲಗರ, ಡಾ.ಗಂಗಾಂಬಿಕಾ ಅಕ್ಕ, ಅನಿಲಕುಮಾರ ರಗಟೆ, ಶಿವರಾಜ ನರಶೆಟ್ಟಿ, ಸಂಜೀವ ವಾಡಿಕರ್, ಅನಿಲ ಭೂಸಾರೆ, ನರಸಿಂಗರೆಡ್ಡಿ ಗದ್ಲೇಗಾಂವ ಮೊದಲಾದವರು ಇದ್ದರು.