ಬೀದರ್: ಬಸವಕಲ್ಯಾಣದಲ್ಲಿ ಭಾನುವಾರ (ಫೆ.7) ನಡೆಯಲಿರುವ ರಾಜ್ಯಮಟ್ಟದ ಬೇಡ ಜಂಗಮ ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಒಂದು ಲಕ್ಷ ಬೇಡ ಜಂಗಮರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ರವೀಂದ್ರ ಸ್ವಾಮಿ ಹೇಳಿದರು.
ನಗರದ ಪಾಪನಾಶ ದೇವಸ್ಥಾನ ಪರಿಸರದಲ್ಲಿ ಶನಿವಾರ ನಡೆದ ಬೇಡ ಜಂಗಮ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಭಿಕ್ಷಾಟನೆ ಮಾಡುತ್ತ ಬದುಕು ಸಾಗಿಸುತ್ತಿರುವ ಸಮಾಜದ ಬಗ್ಗೆ ಯಾವ ಸರ್ಕಾರಕ್ಕೂ ಕನಿಕರ ಇಲ್ಲ. ಚುನಾವಣೆ ಬಂದಾಗ ಸಮಾಜವನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುವವರಿಗೆ ಪಾಠ ಕಲಿಸಬೇಕಿದೆ. ಈಗಾಗಲೇ ರಾಜ್ಯದಲ್ಲಿ ಹಲವರಿಗೆ ಬೇಡ ಜಂಗಮ ಪ್ರಮಾಣ ಪತ್ರ ದೊರೆತರೂ ಅದಕ್ಕೆ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಪರಿಶಿಷ್ಟರ ಪಟ್ಟಿಯಲ್ಲಿ ಸುಮಾರು 700 ಜಾತಿ, ಉಪ ಜಾತಿಗಳು ಇದ್ದರೂ ಕೆಲ ಸಂವಿಧಾನ ವಿರೋಧಿಗಳು ಬೇಡ ಜಂಗಮ ಸಮಾಜವನ್ನು ಗುರಿಯಾಗಿಸುತ್ತಿದ್ದಾರೆ. ತಾಕತ್ತಿದ್ದರೆ ಬೇರೆ ಪರಿಶಿಷ್ಟ ಜಾತಿಗಳನ್ನು ಕೆಣಕಲಿ ಎಂದು ಸವಾಲು ಹಾಕಿದರು.
ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಕೆಲವರು ಸಮಾಜದ ವಿರುದ್ಧ ದಿನಕ್ಕೊಂದು ಹೇಳಿಕೆ ಕೊಟ್ಟು ಸಮಾಜದವರನ್ನು ಅನಿವಾರ್ಯವಾಗಿ ಸಿಡಿದೇಳುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಖಂಡರಾದ ಶಿವಕುಮಾರ ಸ್ವಾಮಿ, ವಕೀಲ ಸಂಜಯ ಮಠಪತಿ, ಶ್ರೀಕಾಂತ ಸ್ವಾಮಿ ಮಾತನಾಡಿದರು.
ಶಿವಯ್ಯ ಸ್ವಾಮಿ, ಅಮರ ಸ್ವಾಮಿ ಔರಾದ್, ಮಹೇಶ್ವರ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಬಸವಯ್ಯ ಸ್ವಾಮಿ, ಮುರುಳಾರಾಧ್ಯ ಸ್ವಾಮಿ ಚಿಟ್ಟಾ, ವರದಯ್ಯ ಸ್ವಾಮಿ ಗಾದಗಿ, ರಾಜು ಸ್ವಾಮಿ ವಿಲಾಸಪುರ, ಬಸು ಸ್ವಾಮಿ ಚಿದ್ರಿ ಮಠ, ಸಂತೋಷ ಸ್ವಾಮಿ ಔರಾದ್, ಅಭಿಷೇಕ ಸ್ವಾಮಿ, ಅಶೋಕ ಸ್ವಾಮಿ ಕಣಜಿ, ಚಿದಾನಂದ ಸ್ವಾಮಿ ಇದ್ದರು.