ಬಸವಕಲ್ಯಾಣ: ಶಾಸಕ ಶರಣು ಸಲಗರ ಅವರು ಸತತ ಪ್ರಯತ್ನ ನಡೆಸಿ ಆಮ್ಲಜನಕದ 60 ಸಿಲೆಂಡರ್ಗಳನ್ನು ಕಲಬುರ್ಗಿಯಿಂದ ತಾಲ್ಲೂಕಿಗೆ ತರಿಸುವಲ್ಲಿ ಸಫಲರಾಗಿದ್ದಾರೆ.
ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಹಾಗೂ ಕೋವಿಡ್ನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆಗಿದ್ದರಿಂದ ಆಸ್ಪತ್ರೆಗಳಿಗೆ ಹೋಗಿ ಪರಿಶೀಲಿಸಿದ ಅವರು ಕಲಬುರ್ಗಿ ಸಂಸದ ಉಮೇಶ ಜಾಧವ ಹಾಗೂ ಬೀದರ್ ಸಂಸದ ಭಗವಂತ ಖೂಬಾ, ಕಲಬುರ್ಗಿ ಜಿಲ್ಲಾಧಿಕಾರಿ ಜ್ಯೋತ್ಸ್ನಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಿ ಸಿಲಿಂಡರ್ ಲಭ್ಯವಾಗುವಂತೆ ಮಾಡಿದ್ದಾರೆ.
ಶರಣು ಸಲಗರ ಅವರು ಮಂಗಳವಾರ ಇಡೀ ದಿನ ನಗರದಲ್ಲಿ ಸಂಚರಿಸಿ ಜನ ಗುಂಪು ಸೇರದಂತೆ ಕ್ರಮ ತೆಗೆದುಕೊಂಡರು. ಅಂಗಡಿ, ಬ್ಯಾಂಕ್, ಮಾರುಕಟ್ಟೆ ಇತ್ಯಾದೆಡೆ ಸಂಚರಿಸಿ ಜನರು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೇಳಿಕೊಂಡರು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ನನಗೆ ಸನ್ಮಾನಿಸಲು ಯಾರೂ ಬರಬಾರದು. ತಮ್ಮ ತಮ್ಮ ಊರುಗಳಲ್ಲಿ ಸುರಕ್ಷಿತವಾಗಿರಬೇಕು ಎಂದೂ ಅವರು ಜನರಿಗೆ ಮನವಿ ಮಾಡಿದ್ದಾರೆ.
ಶಾಸಕ ಶರಣು ಸಲಗರ ಸನ್ಮಾನ
ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಹಿರೇಮಠಕ್ಕೆ ನೂತನ ಶಾಸಕ ಶರಣು ಸಲಗರ ಸೋಮವಾರ ಭೇಟಿ ನೀಡಿ ಚನ್ನವೀರ ಶಿವಾಚಾರ್ಯ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ಹಿರಿಯ ಮುಖಂಡ ರಾಜಕುಮಾರ ಶಿರಗಾಪುರ, ಚಂದ್ರಶೇಖರ ಬಿರಾದಾರ ಮುಡಬಿ, ಸಿದ್ದು ಪಾಟೀಲ, ಮಲ್ಲಿನಾಥ ಹಿರೇಮಠ, ಅಪ್ಪಣ್ಣ ಜನವಾಡಾ ಉಪಸ್ಥಿತರಿದ್ದರು.