ಬೀದರ್: ಶಿಕ್ಷಣದ ಉದ್ದೇಶ ಆದರ್ಶ ವ್ಯಕ್ತಿತ್ವ ನಿರ್ಮಾಣ ಆಗಿದೆಯೇ ಹೊರತು ಅಧಿಕ ಅಂಕ ಗಳಿಕೆ ಅಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಸಚ್ಚಿದಾನಂದ ಹೇಳಿದರು.
ಇಲ್ಲಿಯ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ನಡೆದ ಬಿಲಾಲ್ ಶಿಕ್ಷಣ ಮಹಾದ್ಯಾಲಯದ ಪ್ರಶಿಕ್ಷಣಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ನೈತಿಕತೆ, ಮಾನವೀಯ ಮೌಲ್ಯಗಳೊಂದಿಗೆ ಬೆಳೆಸುವ ಶಿಕ್ಷಣ ಅಗತ್ಯವಾಗಿದೆ ಎಂದು ನುಡಿದರು.
ಜೀವನದಲ್ಲಿ ಏನನ್ನಾದರೂ ಸಾಧಿಸಲು ಮಕ್ಕಳು ಸ್ವಾಮಿ ವಿವೇಕಾನಂದ, ನ್ಯೂಟನ್, ಜೀಜಾಮಾತಾ, ಸಾವಿತ್ರಿಬಾಯಿ ಫುಲೆ ಮೊದಲಾದವರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಸಲಹೆ ಮಾಡಿದರು.
ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಅದರ ಘನತೆ, ಗೌರವ ಕಾಪಾಡಿಕೊಂಡು ಹೋಗಬೇಕಿದೆ. ಭಾವಿ ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಪ್ರಶಿಕ್ಷಣಾರ್ಥಿಗಳು ಮಕ್ಕಳ ಜ್ಞಾನ ವೃದ್ಧಿಗೆ ಪೂರಕವಾಗಿ ಉತ್ತಮ ಪಾಠ ಬೋಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಲಾಲ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಹಮ್ಮದ್ ಸಮೀರ್ ಉಲ್ಲಾ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಬೆಂಬುಳಗೆ, ವಾಸುದೇವ ರಾಠೋಡ್, ಶಿಕ್ಷಕರಾದ ಮೋಹನ್ ಜೋಶಿ, ರಾಜಕುಮಾರ ಗಾದಗೆ, ಅನಿಲಕುಮಾರ ಟೆಕೋಳೆ, ನಾಗರತ್ನ ಟಿ, ಆನಂದ ಕೆ. ಜಾಧವ, ಆರತಿ ಹಣಮಂತ, ಶಗುಫ್ತಾ ಬೇಗಂ, ತೇಜಸ್ವಿನಿ ಸತೀಶಕುಮಾರ, ಪ್ರಿಯಂಕಾ, ರಾಚಪ್ಪ, ಶ್ರುತಿ ಚಂದ್ರಕಾಂತ, ತಂಗೆಮ್ಮ ಶರಣಪ್ಪ ಇದ್ದರು.
ಕಾವೇರಿ ಶಿವರಾಜ ಸ್ವಾಗತಿಸಿದರು. ಅಶ್ವಿನಿ ಪ್ರಭುರಾವ್ ನಿರೂಪಿಸಿದರು. ಮೀನಾಕ್ಷಿ ಮಚ್ಚೇಂದ್ರ ವಂದಿಸಿದರು.