ಬೀದರ್: ‘ಕೇಂದ್ರ ಸಚಿವ ಭಗವಂತ ಖೂಬಾ ಅವರು ನನ್ನ ಸೋಲಿಸಲು ಶತಾಯ ಗತಾಯ ಪ್ರತ್ನಿಸಿದರು. ಪಕ್ಷ ತಾಯಿ ಇದ್ದ ಹಾಗೆ, ಖೂಬಾ ತಾಯಿಗೆ ದ್ರೋಹ ಮಾಡಿದರು. ಆದರೆ, ಔರಾದ್ ಜನ ನನ್ನ ಕೈಬಿಡಲಿಲ್ಲ’ ಎಂದು ಔರಾದ್ನಿಂದ ನಾಲ್ಕನೇ ಬಾರಿ ಆಯ್ಕೆಯಾದ ಪ್ರಭು ಚವಾಣ್ ಹೇಳಿದರು.
ಫಲಿತಾಂಶ ಘೋಷಣೆ ನಂತರ ಪ್ರತಿಕ್ರಿಯೆ ನೀಡಿದ ಅವರು,‘ನಾನೇನು ಅವರಿಗೆ ಅನ್ಯಾಯ ಮಾಡಿದೆ ಎಂದು ಅವರು ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಕೆಲವರಿಗೆ ಪಕ್ಷದಿಂದ ರಾಜೀನಾಮೆ ಕೊಡಿಸಿ ನನ್ನ ಸೋಲಿಗೆ ಏನೆಲ್ಲ ಪ್ರಯತ್ನ ಮಾಡಿದರು. ಇದು ಕೇಂದ್ರ ಸಚಿವರು ಮಾಡುವ ಕೆಲಸವೇ? ಕಾರ್ಯಕರ್ತರಿಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಪ್ರಭು ಚವಾಣ್ಗೆ ಬೆಂಬಲಿಸಬೇಡಿ ಎಂದು ಒತ್ತಡ ಹಾಕಿದ್ದರು’ ಎಂದು ಆರೋಪಿಸಿದರು.
‘ನಾನು ಲೋಕಸಭಾ ಚುನಾವಣೆಯಲ್ಲಿ ಅವರಿಗಾಗಿ ಕೆಲಸ ಮಾಡಿದ್ದೇನೆ. ಆಳಂದ, ಚಿಂಚೋಳಿ ಸೇರಿ ಎಲ್ಲ ಕಡೆ ಅವರ ಪರವಾಗಿ ಓಡಾಡಿ ಅವರ ಗೆಲುವಿಗೆ ಶ್ರಮಿಸಿದ್ದೆ. ಆದರೆ ಅವರು ನನ್ನನ್ನು ಸೋಲಿಸಲು ಯತ್ನಿಸಿದ್ದು ಸರಿಯೇ’ ಎಂದು ಕಣ್ಣೀರು ಹಾಕಿ ‘ಮುಂದೆ ಅವರಿಗೆ ದೇವರೇ ನೋಡಿಕೊಳ್ಳಲಿದ್ದಾನೆ’ ಎಂದರು.