ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನಶೆಟ್ಟಿ ಪರ ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ನಗರದ ವಿವಿಧೆಡೆ ಪ್ರಚಾರ ನಡೆಸಿದರು.
ಎಲ್ಐಜಿ ಕಾಲೊನಿ, ಎಂಐಜಿ ಕಾಲೊನಿ, ಜೆಪಿ ನಗರ ಮತ್ತಿತರ ಕಡೆಗಳಲ್ಲಿ ಮತದಾರರ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮತಯಾಚಿಸಿದರು.
‘ಚನಶೆಟ್ಟಿ ಉತ್ತಮ ಸಂಘಟನಾ ಶಕ್ತಿ ಹೊಂದಿದ್ದಾರೆ. ಅವರಿಂದಾಗಿ ಜಿಲ್ಲೆಯಲ್ಲಿ ಕನ್ನಡ ಚಟುವಟಿಕೆಗಳಿಗೆ ಬಲ ಬಂದಿದೆ. ಪರಿಷತ್ನ್ನು ಇನ್ನಷ್ಟು ಸಶಕ್ತಗೊಳಿಸಲು ಅವರಿಗೆ ಮತ್ತೊಂದು ಅವಧಿಗೆ ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.
ಕತೆಗಾರ್ತಿ ಪಾರ್ವತಿ ಸೋನಾರೆ ಮಾತನಾಡಿ, ‘ಚನಶೆಟ್ಟಿ ಅವರು ಮಹಿಳಾ ಘಟಕ ರಚಿಸಿ ಪರಿಷತ್ತಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ್ದಾರೆ. ಅಖಿಲ ಭಾರತ ಮಹಿಳಾ ಕವಯತ್ರಿಯರ ಸಮ್ಮೇಳನ ಆಯೋಜಿಸುವ ಮೂಲಕ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವೇದಿಕೆ ಒದಗಿಸಿದ್ದಾರೆ. ಹೀಗಾಗಿ ಅವರನ್ನು ಪುನರಾಯ್ಕೆ ಮಾಡುವುದು ಅಗತ್ಯವಾಗಿದೆ’ ಎಂದು ಹೇಳಿದರು.
ಪರಿಷತ್ ಮಹಿಳಾ ಘಟಕದ ವಿದ್ಯಾವತಿ ಬಲ್ಲೂರ ಮಾತನಾಡಿ, ‘ಚನಶೆಟ್ಟಿ ಅವರು ಕನ್ನಡದ ಕೆಲಸಕ್ಕೆ ಸದಾ ಮುಂದಿರುತ್ತಾರೆ. ಗಡಿಯಲ್ಲಿ ಕನ್ನಡ ಸಮೃದ್ಧಗೊಳಿಸಲು ನಿರಂತರ ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.
ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ, ಕುಸುಮಾ ಹತ್ಯಾಳ, ಸಕಲೇಶ್ವರಿ ಚನಶೆಟ್ಟಿ, ಸಾಕ್ಷಿ ರಾಜು, ಆನಂದ ಪಾಟೀಲ, ಅಶೋಕ ದಿಡಗೆ, ಶಿವಕುಮಾರ ಚನಶೆಟ್ಟಿ ಇದ್ದರು.