‘ಕೊಲೆ ಪ್ರಕರಣವೊಂದರ ಆರೋಪಿಯಾದ ಯೂನೂಸ್, ಇಲ್ಲಿನ ನವಬಾಗದ ಸಂದಲಬಾವಡಿ ಪ್ರದೇಶದ ಮನೆಯೊಂದರಲ್ಲಿದ್ದಾನೆ ಎಂಬ ಮಾಹಿತಿ ಇತ್ತು. ಅದನ್ನು ಆಧರಿಸಿ, ಪೊಲೀಸರು ನಸುಕಿನ ನಾಲ್ಕು ಗಂಟೆ ವೇಳೆಗೆ ಆ ಮನೆ ಮೇಲೆ ದಾಳಿ ನಡೆಸಿ ಬಂಧಿಸಲು ಮುಂದಾಗಿದ್ದಾರೆ. ಆಗ, ಆರೋಪಿಯು ಪರಾರಿಯಾಗಲು ಪಿಎಸ್ಐ ಹಾಗೂ ಕಾನ್ಸ್ಟೆಬಲ್ ಇಬ್ಬರಿಗೂ ಚಾಕುವಿನಿಂದ ಇರಿದು ಓಡಲು ಯತ್ನಿಸಿದ್ದಾನೆ. ಈ ಸಂದರ್ಭ, ಪಿಎಸ್ಐ ಆರೀಫ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಅದನ್ನು ಲೆಕ್ಕಿಸದ ಆತ, ಪೊಲೀಸರ ಮೇಲೆ ಕಲ್ಲು ತೂರಿ ಸ್ಥಳದಿಂದ ಕಾಲ್ಕೀಳಲು ಮುಂದಾಗಿದ್ದಾನೆ. ಆಗ ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ತಗುಲುತ್ತಿದ್ದಂತೆಯೇ ನೆಲಕ್ಕುರುಳಿದ ಆತನನ್ನು ಹಾಗೂ ಅವನ ಬಳಿಯಿದ್ದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.