ಬೀದರ್: ನಗರದಲ್ಲಿ ಫೆಬ್ರುವರಿ 25 ಮತ್ತು 26 ರಂದು ನಡೆಯಲಿರುವ ಜನಪರ ಉತ್ಸವಕ್ಕೆ ಸೋಮವಾರ ಕಲಾ ತಂಡಗಳಿಗೆ ಆಹ್ವಾನ ನೀಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್, ಜಿಲ್ಲಾಧಿಕಾರಿ ಡಾ. ಎಸ್.ಆರ್. ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ, ಬೀದರ್ ಉಪ ವಿಭಾಗಾಧಿಕಾರಿ ಶಿವಕುಮಾರ ಶಿಲವಂತ ಮೊಹರಂ ಪದಕ್ಕೆ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಕಲಾ ತಂಡಗಳಿಗೆ ವಿಶಿಷ್ಟವಾಗಿ ಆಮಂತ್ರಣ ನೀಡಿದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀತಲ್ ಚವ್ಹಾಣ್ ಬುಲಾಯಿ ಹಾಡಿಗೆ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು.
ಬಾಬುವಾಲಿ, ಅರವಿಂದಕುಮಾರ ಅರಳಿ, ಅನಿಲಕುಮಾರ ಬೆಲ್ದಾರ್, ರಾಜು ಕಡ್ಯಾಳ, ಮಾರುತಿ ಬೌದ್ಧೆ, ಮಾಳಪ್ಪ ಅಡಸಾರೆ, ವಿರೂಪಾಕ್ಷ ಗಾದಗಿ, ಜಗನ್ನಾಥ ಜಮಾದಾರ, ಚಂದ್ರಪ್ಪ ಹೆಬ್ಬಾಳಕರ್, ಸಂಜೀವಕುಮಾರ ಅತಿವಾಳೆ ಇದ್ದರು. ಮರಕಲ್, ಜೋಜನಾ ಗ್ರಾಮದವರು ಭಾಗವಹಿಸಿದ್ದರು.
ಪ್ರಚಾರಕ್ಕೆ ಚಾಲನೆ: ಸಾಮಾಜಿಕ ಜಾಲತಾಣಗಳ ಮೂಲಕ ಜಾಗತಿಕ ಮಟ್ಟದಲ್ಲಿ ಜನಪರ ಉತ್ಸವದ ಪ್ರಚಾರಕ್ಕೆ ಸಚಿವ ಈಶ್ವರ ಖಂಡ್ರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೂಪಿಸಿದ ಬ್ಲಾಗ್ (www.uthsavajanapara.wordpress.com), ಜನಪರ ಉತ್ಸವದ ಹೆಸರಿನಲ್ಲಿ ಇರುವ ಫೇಸ್ಬುಕ್ ಹಾಗೂ ಟ್ವಿಟರ್ಗೆ ಚಾಲನೆ ನೀಡಿದರು. ಜನಪರ ಉತ್ಸವದ ಲಾಂಛನವನ್ನೂ ಬಿಡುಗಡೆ ಮಾಡಲಾಯಿತು.