ಬೀದರ್: ಮೈಸೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಜಾಂಬೂರಿಯಲ್ಲಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
ಜಿಲ್ಲೆಯ 200 ಮಕ್ಕಳು, 12 ಶಿಕ್ಷಕರು ಹಾಗೂ 6 ಜನ ರಾಜ್ಯ ಮುಖ್ಯ ಕಚೇರಿ ಸಿಬ್ಬಂದಿ ಜಾಂಬೂರಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಪಥ ಸಂಚಲನ ನಡೆಸಿ ರಾಷ್ಟ್ರಪತಿಗೆ ಗೌರವ ಸಲ್ಲಿಸಿದ ತಂಡದಲ್ಲಿ ಬೀದರ್ನ ಗುರುನಾನಕ ಶಾಲೆಯ ಋಷಿಕೇಶ, ಜ್ಞಾನಸುಧಾ ಶಾಲೆಯ ದಿವ್ಯಾನಿ ಸ್ವಾಮಿ ಕೂಡ ಇದ್ದದ್ದು ವಿಶೇಷ.
ಶಾಹೀನ್ ಶಾಲೆಯ ಮಕ್ಕಳು ಕವ್ವಾಲಿ, ಕರಡ್ಯಾಳ ಗುರುಕುಲದ ಮಕ್ಕಳು ಹಗ್ಗದ ಯೋಗ, ಭಾಂಗಡಾ ನೃತ್ಯ ಪ್ರದರ್ಶಿಸಿ ನೋಡುಗರನ್ನು ಮಂತ್ರಮುಗ್ಧಗೊಳಿಸಿದರು ಎಂದು ಸ್ಕೌಟ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ತಿಳಿಸಿದರು.
ರಾಕ್ ಕ್ಲೈಂಬಿಂಗ್, ಕಮಾಂಡೋ ಬ್ರಿಜ್, ರೋಪ್ ಕ್ಲೈಂಬಿಂಗ್, ಟೈರ್ವಾಲ್ ರಸ್ಸಿಯನ್ವಾಲ್, ಪೈರ್ಡಿಚ್, ಟೂರ್ ಕ್ರಾಸಿಂಗ್ ಭಿಮ್ ಕ್ಲೈಂಬಿಂಗ್ ಆ್ಯಂಡ್ ರ್್್ಯಾವ್ಲೆಂಗ್, ಮಂಕಿ ಕ್ರಾವಲಿಂಗ್, ಲಾಗ್ ಕ್ರಾಸಿಂಗ್, ಸ್ನೇಕ್ ಟಿಲ್ಡವಾಕ್ನಲ್ಲಿ ಅಧಿಕ ಅಂಕ ಗಳಿಸಿದರು. ಅಕ್ರಾಲಿಕ್ ಪೇಂಟಿಂಗ್, ಮಾಡೆಲ್ ಮೇಕಿಂಗ್ ಓರೆಗಾಮಿ ಬೆಸ್ಟ್ ಔಟ್ ಆಫ್ ವೇಸ್ಟ್, ಚಿತ್ರಕಲೆ, ಯಕ್ಷಗಾನ, ರಂಗೊಲಿ, ಚಾಪೆ ನೇಯುವುದರಲ್ಲೂ ಉತ್ತಮ ಸಾಧನೆ ಮಾಡಿದರು. ಆರ್ಚರಿ, ಮಾರಸ್ ಮ್ಯಾನ್, ಬ್ಯಾಸ್ಕೆಟ್ಬಾಲ್, ಬ್ಲೋ ಔಟ್ ಬಲೂನ್, ಕಿಮ್ಸ್ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಎಂದರು.
ಶಿವಕುಮಾರ ಮೆಣಸೆ ಜಿಲ್ಲೆಯ ಜಾಂಬೂರಿ ಸ್ಕೌಟ್ ನಾಯಕರಾಗಿ, ಸುಸಾನಾ ಗೈಡ್ ನಾಯಕಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಗೈಡ್ಸ್ ಆಯುಕ್ತೆ ಲೀಲಾವತಿ ಚಾಕೋತೆ, ಡಾ. ಎಚ್.ಬಿ. ಭರಶೆಟ್ಟಿ, ಕೆ.ಎಸ್. ಚಳಕಾಪುರೆ, ಉಮೇಶ ಅಷ್ಟೂರೆ ಭಾಗವಹಿಸಿದ್ದರು.