ಬೀದರ್: ಡಾ. ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ದಲಿತರ ಸ್ಥಾನಗಳನ್ನು ಅಸ್ಪೃಶ್ಯರಲ್ಲದವರು ಪಡೆಯುತ್ತಿದ್ದಾರೆ ಎಂದು ಬೆಲ್ದಾಳ ಸಿದ್ಧರಾಮ ಶರಣರು ವಿಷಾದಿಸಿದರು.ಡಾ, ಅಂಬೇಡ್ಕರ್ ಜಯಂತಿ ನಿಮಿತ್ತ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಹೈದರಾಬಾದ್ ಕರ್ನಾಟಕದಲ್ಲಿ ಇರುವ ಮೀಸಲು ಸ್ಥಾನಗಳಲ್ಲಿ ಒಬ್ಬ ಕೂಡ ಅಂಬೇಡ್ಕರ್ ಸಮುದಾಯಕ್ಕೆ ಸೇರಿದ ಪ್ರತಿನಿಧಿ ಇಲ್ಲದಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕ್ರಮ ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಪಕ್ಷಗಳು ವ್ಯವಸ್ಥಿತವಾಗಿ ದಲಿತರು ಮತ್ತು ಅವರಿಗೆ ಸಿಗಬೇಕಾದ ಹಕ್ಕುಗಳನ್ನು ದಕ್ಕದಂತೆ ನೋಡಿಕೊಳ್ಳುತ್ತಿವೆ. ದಲಿತರು ಎಚ್ಚತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಅಂಬೇಡ್ಕರ್ ಯಾವುದೇ ಸಮುದಾಯಕ್ಕೆ ಸಿಮಿತ ಆಗಿಲ್ಲ. ಸರ್ವರೂ ಒಪ್ಪಿಕೊಳ್ಳುವಂಥ ಸಂವಿಧಾನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ದಲಿತರು ಹಾಗೂ ಶೋಷಿತರಿಗಾಗಿ ಅವರು ನಡೆಸಿದ್ದ ಹೋರಾಟ ಮಾದರಿಯಾಗಬೇಕು ಎಂದು ತಿಳಿಸಿದರು.
ಯಾವುದೇ ಗುಡಿ ಗುಂಡಾಗಳಲ್ಲಿ ದೇವರಿಲ್ಲ. ಹೀಗಾಗಿ ಯಡಿಯೂರಪ್ಪನವರು ಗುಡಿ ಗುಂಡಾರ ಸುತ್ತದೇ ಗೆಲ್ಲಿಸಿದ ಮತದಾರ ಪ್ರಭುಗಳ ಸೇವೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಭಂತೆ ಧಮ್ಮಾನಂದ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ರಹೀಮ್ಖಾನ್, ಬಂಡೆಪ್ಪ ಕಾಶೆಂಪೂರ್, ಎನ್.ಇ.ಕೆ.ಆರ್.ಟಿ.ಸಿ. ಅಧ್ಯಕ್ಷ ರಘುನಾಥ ಮಲ್ಕಾಪುರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಕಾರ್ಯ ನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್, ಅಪರ ಜಿಲ್ಲಾಧಿಕಾರಿ ಮಾಣಿಕಪ್ಪ ಮಂಗಲಗಿ, ನಗರಸಭೆ ಅಧ್ಯಕ್ಷೆ ಶ್ರೀದೇವಿ ಕರಂಜಿ, ಆಯುಕ್ತ ಎಸ್.ಪಿ. ಮುಧೋಳ್, ಎಂ.ಎಸ್. ಕಟಗಿ ಮತ್ತಿತರರು ಉಪಸ್ಥಿತರಿದ್ದರು.