ಹುಮನಾಬಾದ್: ತಾಲ್ಲೂಕಿನ ಧುಮ್ಮನಸೂರ ತಾಂಡಾ ಬಂಜಾರ ನಿವಾಸಿಗಳು ಕಳೆದ ಐದು ದಶಕದಿಂದ ದೀಪಾವಳಿ ಬಲಿಪಾಡ್ಯಮಿ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಶುಕ್ರವಾರ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಿ ಸಂಭ್ರಮಿಸಿದರು.
ಇಲ್ಲಿನ ಯುವತಿಯರು, ಬಾಲಕಿಯರು ತಾಂಡಾ ಆಸುಪಾಸಿನ ತೋಟ ಹಾಗೂ ಅರಣ್ಯ ಪ್ರದೇಶಕ್ಕೆ ತೆರಳಿ, ಒಂಬತ್ತು ಜಾತಿ ಹೂವು ಕಿತ್ತು ತಂದು ಇಲ್ಲಿನ ಮಾಳಶೆಟ್ಟಿ ಅವರ ತೋಟದ ಜೋಡಿ ಲಕ್ಷ್ಮಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ತದನಂತರ ವಿವಿಧೆಡೆಯಿಂದ ಸಂಗ್ರಹಿಸಿ ತಂದ ಹೂವಿನಿಂದ ತುಂಬಿದ್ದ ಬುಟ್ಟಿ ತಲೆಯ ಮೇಲೆ ಹೊತ್ತು ಶ್ರಮ ಜೀವಿಗಳಾದ ನಮ್ಮ ಪಾಲಕರ ಶಕ್ತಿ, ಆತ್ಮಸ್ಥೈರ್ಯ ಇಮ್ಮಡಿಗೊಳಿಸಿ, ಆರೋಗ್ಯ, ಆಯಸ್ಸು ಜೊತೆಗೆ ಐಶ್ವರ್ಯ ಕೊಟ್ಟು ಕಾಪಾಡು’ ಎಂದು ‘ಮಾತೆ ಜೋಡಿ ಲಕ್ಷ್ಮಿಯನ್ನು ಬಂಜಾರ ಭಾಷೆಯಲ್ಲಿ ಪ್ರಾರ್ಥಿಸಿದರು.
ತಾಂಡಾದಲ್ಲಿನ ಮರಗೆಮ್ಮ ದೇವಿ ಹಾಗೂ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತಾಂಡಾದಲ್ಲಿನ ಪ್ರತಿ ಮನೆಗೆ ತೆರಳಿ, ಅಂಗಳಲ್ಲಿ ಬಿದ್ದ ಸಗಣಿಗೆ ಲಿಂಗ ಸ್ವರೂಪಕೊಟ್ಟು ಹೂವಿನಿಂದ ಅಲಂಕೃತಗೊಳಿಸಿ, ಪೂಜಿಸಿದ ನಂತರ ಸಾಮೂಹಿಕ ಪ್ರಸಾದ ವ್ಯವಸ್ಥೆ ಮಾಡಲಾಯಿತು.
‘ಐದು ದಶಕ ಹಿಂದೆ ತಾಂಡಾಕ್ಕೆ ಬರುವುದು ಅಸಾಧ್ಯವಿತ್ತು. ಮಾಳಶೆಟ್ಟಿ ಅವರ ತೋಟದ ಸಮೀಪ ಬರಲು ಭಯ ಉಂಟಾಗುತ್ತಿತ್ತು. ಅಂದು ರಾಮಶೆಟ್ಟೆಪ್ಪ ಮಾಳಶೆಟ್ಟಿ ಅವರು ಜೋಡಿಲಕ್ಷ್ಮಿ ಪ್ರತಿಷ್ಟಾಪಿಸಿದಾಗಿನಿಂದ ಸಂಕಟ ನಿವಾರಣೆಯಾಗಿದೆ. ಅಂದಿನಿಂತ ಪ್ರತಿ ವರ್ಷ ದೀಪಾವಳಿ ಬಲಿಪಾಡ್ಯಮಿ ದಿನ ತಪ್ಪದೇ ಈ ವಿಶಿಷ್ಟ ಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ’ ಎಂದು ತಾಂಡಾ ಅಜ್ಜಿ ಸಕ್ಕುಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ರೇಷ್ಮಾ, ದಿವ್ಯಾ, ಸುಷ್ಮಾ, ರವಿನಾ, ಕಾವೇರಿ, ಸುನೀತಾ, ಸುಜಾತಾ ಮತ್ತು ಅರವಿಂದ ಪವಾರ, ಪ್ರಭು ರಾಠೋಡ, ಮಾಣಿಕರಾವ ಪವಾರ, ಸಂಜು ಚವಾಣ, ಪ್ರೇಮ ರಾಠೋಡ, ಬಾಬು ಚವಾಣ ಮೊದಲಾದವರು ಇದ್ದರು.