ಔರಾದ್: ತಾಲ್ಲೂಕಿನ ದಾಬಕಾ ಹೋಬಳಿಯಲ್ಲಿ ಮಳೆ ಕೊರತೆಯಿಂದಾಗಿ ಮುಂಗಾರು ಬೆಳೆ ಹಾನಿಯಾಗಿದೆ. ಬೊಂತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಂಡಿಬಾರಾವ ಪಾಟೀಲರ ನೇತೃತ್ವದಲ್ಲಿ ರೈತರ ನಿಯೋಗ ಈಚೆಗೆ ತಹಶೀಲ್ದಾರ್ ಮತ್ತು ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
‘ಈ ವರ್ಷ ಮುಂಗಾರು ಹಂಗಾಮಿನ ಆರಂಭದಲ್ಲಿ ಮಳೆ ಚೆನ್ನಾಗಿ ಆಗಿದೆ. ಇದರಿಂದ ರೈತರು ಉದ್ದು, ಹೆಸರು, ಸೋಯಾ, ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಮಳೆಯಾಗದೆ ಮುಂಗಾರು ಬೆಳೆ ಪೂರ್ಣವಾಗಿ ಹಾಳಾಗಿದೆ’ ಎಂದು ಅಧಿಕಾರಿಗಳಿಗೆ ತಿಳಿಸಿದರು.
‘ಈ ಸಲ ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿದೆ. ಇದರ ಹೆಚ್ಚು ಪರಿಣಾಮ ಆಗಿರುವುದು ದಾಬಕಾ ಹೋಬಳಿ ಕೇಂದ್ರದಲ್ಲಿ. ಉದ್ದು, ಹೆಸರು ಬೆಳೆದವರಿಗೆ ಹಾಕಿರುವ ಹಣ ಬಂದಿಲ್ಲ. ಇನ್ನು ಸೋಯಾ ಕೂಡ ನೆಲ ಕಚ್ಚಿದೆ. ಹೀಗಾಗಿ ಈ ಭಾಗದ ರೈತರು ತೀವ್ರ ಆತಂಕದಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.
‘ಕೂಡಲೇ ಸಮೀಕ್ಷೆ ಮಾಡಿ ಬೆಳೆ ವಿಮೆ ಕೊಡಿಸುವುದರ ಜತೆಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿ ಹಿಂಗಾರು ಬಿತ್ತನೆಗೆ ಬೀಜ ಮತ್ತು ಗೊಬ್ಬರದ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.