ಬಸವಕಲ್ಯಾಣ: ಜನರು ಉತ್ತಮ ಆರೋಗ್ಯ ಹೊಂದಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪಟ್ಟಣ ಠಾಣೆ ಸಿಪಿಐ ಅಲಿಸಾಬ್ ಹೇಳಿದರು.
ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಅರೋಗ್ಯ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಗುಟ್ಕಾ ದುಷ್ಪರಿಣಾಮಗಳು ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ ಕಿರು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಆರೋಗ್ಯ ಸರಿಯಿದ್ದರೆ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದ್ದರಿಂದ ಗುಟ್ಕಾ ಸೇವನೆ, ಸಿಗರೇಟ್, ಬೀಡಿ ಸೇದುವುದನ್ನು ಬಿಡಬೇಕು. ಒಂದು ಸಿಗರೇಟ್ ಸೇವನೆಯಿಂದ 7 ನಿಮಿಷ ಆಯುಷ್ಯ ಕಡಿಮೆ ಆಗುತ್ತದೆ ಎಂದರು. ಕಲಾವಿದರ ತಂಡದ ಮಧುಕರ ಘೋಡಕೆ ಮಾತನಾಡಿದರು.
ಸಬ್ ಇನ್ಸ್ಪೆಕ್ಟರ್ ಗುರುರಾಜ ಪಾಟೀಲ ಇದ್ದರು. ಕಲಾವಿದರಾದ ಯೇಸುದಾಸ ಅಲಿಯಂಬರ್, ಸುನಿಲ ಜಮಾದಾರ, ನೀಕಾಶ ಕಾಂಬಳೆ, ಶ್ರೀಶೈಲ್ ಕಾಂಬಳೆ, ಶಿವರಾಜ ಕಾಯ್ಕಿಣಿ, ಬಸವರಾಜ ಪೂಜಾರಿ ನಾಟಕ ಪ್ರದರ್ಶಿಸಿದರು.