ಬೀದರ್: ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಥಮ ಕಾರ್ಯಕಾರಿಣಿ ಸಭೆ ನಗರದ ಮಯೂರ ಹೊಟೇಲ್ನಲ್ಲಿ ಭಾನುವಾರ ನಡೆಯಿತು.
ಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆ, ನಿಗಮ ಮಂಡಳಿಗಳಿಗೆ ನಾಮನಿರ್ದೇಶನ, ಸಚಿವ ಸಂಪುಟದಲ್ಲಿ ಜಿಲ್ಲೆಗೆ ಸ್ಥಾನಮಾನ ನೀಡಿಕೆ, ಜಿಲ್ಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಕೆ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಮತ್ತೆ ಹಾಲಿ ಸಂಸದ ಎನ್. ಧರ್ಮಸಿಂಗ್ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು ಎನ್ನುವ ಬಗ್ಗೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು ಎಂದು ಪ್ರಕ್ಷದ ಪ್ರಮುಖರು ತಿಳಿಸಿದ್ದಾರೆ.
ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ, ಬೀದರ್-–ಹೈದರಾಬಾದ್ ನಡುವಣ ಇಂಟರ್ಸಿಟಿ ರೈಲು ಹಾಗೂ ಬೀದರ್–-ಬೆಂಗಳೂರು ನಡುವೆ ಹೊಸ ರೈಲು ಆರಂಭಕ್ಕೆ ಕಾರಣರಾದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಎನ್. ಧರ್ಮಸಿಂಗ್, ಕೆ.ಎಚ್. ಮುನಿಯಪ್ಪ ಅವರ ಕಾರ್ಯವನ್ನು ಪ್ರಶಂಶಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಜಿ ಅರ್ಷದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲಿಕರಾವ್, ಉಪಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಅರವಿಂದಕುಮಾರ್ ಅರಳಿ, ರಾಜಶೇಖರ್ ಪಾಟೀಲ್, ಎಐಸಿಸಿ ಸದಸ್ಯೆ ಗುರಮ್ಮ ಸಿದ್ಧಾರೆಡ್ಡಿ, ಕೆಪಿಸಿಸಿ ಸದಸ್ಯ ಕೈಸರ್ ರೆಹಮಾನ್, ಅರುಣಕುಮಾರ್ ಪಾಟೀಲ್ ಇದ್ದರು.