ಶಿವಮೊಗ್ಗ: ಪ್ರತಿದಿನ ರಕ್ತದಕೊರತೆಯಿಂದ ರೋಗಿಗಳು ಮೃತಪಡುತ್ತಿದ್ದಾರೆ. ರಕ್ತದ ಕೊರತೆ ನೀಗಿಸಲು ಯುವಜನತೆಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ವಕೀಲಸೀತಾರಾಮ್ ಕಿವಿ ಮಾತು ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಆಧಾರ ರಕ್ತದಾನಿ ಸೇವಾ ಟ್ರಸ್ಟ್ನ 8ನೇ ವರ್ಷದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದಾನದಿಂದ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಮಾಣ ವೃದ್ಧಿಯಾಗುತ್ತದೆ.ಸಮಯ ಹಾಗೂ ಅಗತ್ಯಕ್ಕೆ ತಕ್ಕಂತೆ ರಕ್ತದಾನಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಆದರೆ, ರಕ್ತ ದಾನದ ಮಹತ್ವವನ್ನು ಯುವ ಜನತೆ ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮೆಗ್ಗಾನ್ ಆಸ್ಪತ್ರೆಯ ಆಪ್ತ ಸಮಾಲೋಚಕ ಎಸ್.ಎಚ್. ಹನುಮಂತಪ್ಪ ಅವರಿಗೆ ಮಾನವೀಯ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಾನಪದ ಗಾಯಕ ಕೆ.ಎಸ್.ಮಂಜುನಾಥ್ ಅವರಿಗೆ ಅಭಿನಂದನೆ, ಜೀ ಕನ್ನಡ ವಾಹಿನಿಯ ಮಾದೇಶ್ವರ ಧಾರಾವಾಹಿಯ ಕಲ್ಯಾಣದೇವ ಪಾತ್ರಧಾರಿ ಚಂದ್ರಶೇಖರ ಶಾಸ್ತ್ರೀ ಹಾಗೂ ಮರಿದೇವ ಪಾತ್ರಧಾರಿ ಅಮೋಘ ಕೃಷ್ಣ ಅವರನ್ನು ಸನ್ಮಾನಿಸಲಾಯಿತು.
50ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿಹಿಮೊಗೆ ಶ್ರೀನಿವಾಸ್ ಹಾಗೂ ಅವರ ಪತ್ನಿ ಗೀತಾ ಸಿಹಿಮೊಗೆ ಅವರು ದೇಹದಾನಕ್ಕೆ ಅಧಿಕೃತ ನೋಂದಾಯಿಸಿಕೊಂಡರು.