ಕನಕಪುರ: ಸಾತನೂರು ಗ್ರಾಮದಲ್ಲಿ ಅತ್ಯಂತ ಅಪರೂಪವಾದ ಹಾಗೂ ಔಷಧೀಯ ಗುಣವನ್ನು ಹೊಂದಿರುವ ಪುನುಗಿನ ಬೆಕ್ಕೊಂದು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ.
ಗ್ರಾಮದ ಪ್ರಕಾಶ್ ಎಂಬುವರಿಗೆ ಸೇರಿದ ತೋಟದಲ್ಲಿನ ನೀರಿನ ತೊಟ್ಟಿಯಲ್ಲಿ ಅದರ ಮೃತದೇಹ ದೊರೆತಿದೆ. ಅವರು ಸೋಮವಾರ ಬೆಳಿಗ್ಗೆ ತೋಟದ ಕಡೆಗೆ ಹೋದಾಗ ಅದನ್ನು ಗಮನಸಿದ್ದಾರೆ. ಅದು ಇತರ ಬೆಕ್ಕಿನಂತಿರದೆ ವಿಶೇಷವಾಗಿದ್ದುದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅವರು ಹೋಗಿ ನೋಡಿದಾಗ ಅದು ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ಪುನುಗಿನ ಬೆಕ್ಕೆಂದು ಗೊತ್ತಾಗಿದೆ. ನೀರು ಕುಡಿಯಲು ಹೋಗಿ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಿದ್ದಾರೆ.
ಸಾತನೂರು ಪ್ರಾದೇಶಿಕ ಅರಣ್ಯ ವಲಯ ಕಚೇರಿಗೆ ಅದನ್ನು ತಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ದಿನೇಶ್, ಉಪ ವಲಯ ಅರಣ್ಯಾಧಿಕಾರಿ ರಾಜು, ಅರಣ್ಯ ರಕ್ಷಕ ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.