ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ರಾಜಕೀಯ ಸಂಸ್ಕೃತಿ ಬದಲು: ಎನ್‌.ಮಹೇಶ್‌

ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು, ಸಾಧನೆಗಳನ್ನು ಜನರಿಗೆ ತಿಳಿಸಲು ಮನವಿ
Last Updated 17 ಆಗಸ್ಟ್ 2022, 5:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿಯು ಈ ದೇಶದ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸುತ್ತಿದೆ. ಜನಧನ ಯೋಜನೆ, ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆಯಂತಹ ಯೋಜನೆಗಳಿಂದ ಆರ್ಥಿಕ ಸಂಸ್ಕೃತಿಯೂ ಬದಲಾಗುತ್ತಿದೆ’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಮಂಗಳವಾರ ಹೇಳಿದರು.

ಜಿಲ್ಲಾ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ರಾಜಕೀಯದ ಚಹರೆಯನ್ನು ಬದಲಾಯಿಸುತ್ತಿರುವುದರಿಂದ ವಿರೋಧ ಪಕ್ಷಗಳೂ ಬದಲಾಗಲೂ ಅವಕಾಶ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಾಯಕರು ಬಳಸುತ್ತಿದ್ದ ‘ಭಾರತ ಮಾತಾಕೀ ಜೈ’ ಎಂಬ ಘೋಷಣೆ, ಬಿಜೆಪಿಯ ಘೋಷಣೆ ಆಗಿತ್ತು. ಈಗ ಕಾಂಗ್ರೆಸ್‌ನವರೂ ಬಳಸಲು ಶುರುಮಾಡಿದ್ದಾರೆ’ ಎಂದರು.

‘ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಪ್ರತಿ ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂಬುದು ಪ್ರಧಾನಿ ಮೋದಿ ಅವರ ಕಲ್ಪನೆಯಾಗಿತ್ತು. ಪಕ್ಷ ಭೇದ, ಜಾತಿ ಭೇದ ಮರೆತು ಎಲ್ಲರೂ ಅದನ್ನು ಪಾಲಿಸಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿದ ಗಣ್ಯರನ್ನು ನೋಡಿ. ಪದ್ಮ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಸಾಧಕರನ್ನು ಗಮನಿಸಿ. ಎಲೆ ಮರೆ ಕಾಯಂತಿರುವ ನಿಸ್ವಾರ್ಥದಿಂದ ಕೆಲಸ ಮಾಡಿದವರನ್ನು ಆಯ್ಕೆ ಮಾಡಿದೆ. ಬೇರೆ ಯಾವ ಪಕ್ಷಗಳಿಗೂ ಅದು ಸಾಧ್ಯವಿಲ್ಲ’ ಎಂದರು.

‘ಜನ ಧನ ಖಾತೆ ತೆರೆಯುವ ಯೋಜನೆನ್ನು ನಾನೂ ಹಿಂದೆ ಟೀಕೆ ಮಾಡಿದ್ದೆ. ನನಗೆ ಅದರ ಬಗ್ಗೆ ಗೊತ್ತಿರಲಿಲ್ಲ. ಆದರೆ, ಈಗ ಅದೊಂದು ದೊಡ್ಡ ಯಶಸ್ವಿ ಯೋಜನೆ ಸರ್ಕಾರದ ಸಬ್ಸಿಡಿಗಳು ನೇರವಾಗಿ ಖಾತೆಗೆ ಜಮೆ ಆಗುತ್ತಿವೆ’ ಎಂದರು.

‘ರಾಜ್ಯದಲ್ಲೂ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಳೆ ಹಾನಿ ಸಂದರ್ಭದಲ್ಲಿ ಪರಿಹಾರ ಮೊತ್ತವನ್ನು ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಆದರೆ ಇದನ್ನೆಲ್ಲ ನಾವು ಜನಕ್ಕೆ ತಲುಪಿಸುತ್ತಿಲ್ಲ. ಸರ್ಕಾರಗಳ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಮಹೇಶ್‌ ಕರೆ ನೀಡಿದರು.

ಕಾಡಾ ಅಧ್ಯಕ್ಷ ನಿಜಗುಣರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಕೋಷ್ಠಗಳ ರಾಜ್ಯ ಸಂಚಾಲಕ ಪ್ರತಾಪ್‌ ಸಿಂಹ ನಾಯಕ್‌, ಸಹ ಸಂಚಾಲಕ ಸದಾಶಿವಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌, ಪ್ರಕೋಷ್ಠದ ಸಂಚಾಲಕ ಬಾಲಸುಬ್ರಹ್ಮಣ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನೂರೊಂದು ಶೆಟ್ಟಿ, ಮುಖಂಡರಾದ ಕಮಲಮ್ಮ, ಎಂ.ರಾಮಚಂದ್ರ, ಸಿ.ಎನ್‌.ಬಾಲರಾಜು, ಸರಸ್ವತಮ್ಮ ಇತರರು ಇದ್ದರು.

‘ಒಗ್ಗಟ್ಟಾಗಿದ್ದರೆ ಗೆಲುವು ಖಚಿತ’
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ ಅವರು ಮಾತನಾಡಿ, ‘ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಮುಖಂಡರಲ್ಲಿ ಗೊಂದಲಗಳಿವೆ. ಅದು ಇರಬಾರದು. ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಾರದೇ ಇದ್ದರೆ ಮುಖಂಡರಿಗೆ ಹೆಚ್ಚು ಸಮಸ್ಯೆ ಯಾಗುವುದಿಲ್ಲ. ಅವರು ವಿರೋಧ ಪಕ್ಷದಲ್ಲಿ ಇರುತ್ತಾರೆ. ಅಧಿಕಾರವೂ ಇರುತ್ತದೆ. ಆದರೆ, ಕಾರ್ಯಕರ್ತರಿಗೆ ತೊಂದರೆಯಾಗುತ್ತದೆ. ಕೇಂದ್ರ ಹಾಗೂ ಬಿಜೆಪಿಯಲ್ಲಿ ನಮ್ಮದೇ ಸರ್ಕಾರ ಇರುವಾಗಲೇ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿದೆ ಎಂದರೆ, ನಾವು ಅಧಿಕಾರಲ್ಲಿ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರಬಹುದು? ಮುಂದಿನ ಚುನಾವಣೆಯಲ್ಲಿ ನಮಗೆ ಗೆಲ್ಲುವುದಕ್ಕೆ ಅವಕಾಶ ಇದೆ. ಅದಕ್ಕೆ ಮುಖಂಡರೆಲ್ಲ ಗೊಂದಲಗಳನ್ನೆಲ್ಲ ದೂರ ಇರಿಸಿ ಒಗ್ಗಟ್ಟಾಗಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT