ಚಾಮರಾಜನಗರ:ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (ಸಿಎಫ್ಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೌಫ್ ಶರೀಫ್ ಅವರನ್ನು ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಸಿಎಫ್ಐನ ಜಿಲ್ಲಾ ಘಕಟದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರ, ಜಾರಿ ನಿರ್ದೇಶನಾಲಯದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
'ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತುವವರನ್ನು ಮತ್ತು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಇತ್ತೀಚೆಗೆ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿಎಎ– ಎನ್ಆರ್ಸಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಕ್ಯಾಂಪಸ್ ಫ್ರಂಟ್ ನಾಯಕರನ್ನು ಗುರಿಯಾಗಿಸಿಕೊಂಡು ಬಂಧಿಸಲಾಗುತ್ತಿದೆ’ ಎಂದು ಪ್ರತಿಭಟನನಿರತರು ಆರೋಪಿಸಿದರು.
‘ರೌಫ್ ಅವರ ಬಂಧನದ ನಂತರ, ಅವರ ಮನೆಯಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಏನೂ ಸಿಕ್ಕಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಸಿಎಎ-ಎನ್ಆರ್ಸಿ ಅನುಷ್ಠಾನಕ್ಕೆ ಮುನ್ನ ಸಂಘ ಪರಿವಾರವನ್ನು ವಿರೋಧಿಸುತ್ತಿರುವ ನಾಯಕರನ್ನು ಬೆದರಿಸುವುದು ಮತ್ತು ಚಳವಳಿಗಳನ್ನು ಹತ್ತಿಕ್ಕುವುದು ಬಿಜೆಪಿಯ ಗುರಿಯಾಗಿದೆ’ ಎಂದು ದೂರಿದರು.
‘ರೌಫ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಂತಹ ದ್ವೇಷದ ರಾಜಕಾರಣಕ್ಕೆ ಹೆದರುವುದಿಲ್ಲ’ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ಲಾ, ಕಾರ್ಯದರ್ಶಿ ಕಲೀಮ್, ಸರ್ದಾರ್ ಶರೀಫ್, ಸೈಯದ್ ಮುಜಮ್ಮಿಲ್, ಜುನೈದ್ ಮತ್ತು ಮುಸಾಬೆ ಮತ್ತು ಇತರ ಜಿಲ್ಲಾ ಸಮಿತಿ ಸದಸ್ಯರು ಇದ್ದರು.