ಆಯುಧಪೂಜೆ ವಿಜಯದಶಮಿ ಸಂದರ್ಭದಲ್ಲಿ ಏರಿಕೆ ಕಂಡಿದ್ದ ಹೂವುಗಳ ಧಾರಣೆ ಹಬ್ಬದ ನಂತರ ಗಣನೀಯವಾಗಿ ಇಳಿಕೆಯಾಗಿದೆ. ಚೆಂಡುಹೂ ಸೇವಂತಿಗೆ ಸುಗಂಧರಾಜ ಹೂವುಗಳನ್ನು ಕೇಳುವವರೇ ಇಲ್ಲದಂತಾಗಿದೆ. ನಗರದ ಚೆನ್ನಿಪುರದಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕೆಜಿ ಕನಾಂಬರಕ್ಕೆ ₹400ರಿಂ ₹500ರವರೆಗೆ ಬೆಲೆ ಇತ್ತು. ಮಲ್ಲಿಗೆಗೆ ₹200ವರೆಗೆ ಇತ್ತು. ಸೇವಂತಿಗೆಗೆ ಕೆಜಿಗೆ ₹10ರಿಂದ ₹20 ಇತ್ತು. ಚೆಂಡು ಹೂವಿನ ಗರಿಷ್ಠ ಬೆಲೆ ₹10. ಸುಗಂಧರಾಜ ಹೂವಿಗೆ ಕೆಜಿಗೆ ₹30 ಧಾರಣೆ ಇತ್ತು. ಬಟನ್ ಗುಲಾಬಿಯೂ ₹80ಕ್ಕೆ ಸಿಗುತ್ತಿತ್ತು. ‘ಹಬ್ಬದ ಬಳಿಕ ಬೇಡಿಕೆ ದಿಢೀರ್ ಕುಸಿದಿದೆ. ಹಾಗಾಗಿ ಬೆಲೆ ಕಡಿಮೆಯಾಗಿದೆ. ದೀಪಾವಳಿವರೆಗೆ ಇದೇ ಪರಿಸ್ಥಿತಿ ಇರಲಿದೆ. ದೀಪಾವಳಿ ಆ ಬಳಿಕ ಕಾರ್ತಿಕ ಮಾಸ ಇರುವುದರಿಂದ ಬೇಡಿಕೆ ಹೆಚ್ಚಾಗಲಿದ್ದು ಬೆಲೆಯೂ ಜಾಸ್ತಿಯಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.