ಭಾನುವಾರ, ಏಪ್ರಿಲ್ 2, 2023
32 °C
ಮೇಲುಕಾಮನಹಳ್ಳಿ: ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಶಾಸಕರ ಸಲಹೆ

ಕೌಶಲ ಬೆಳೆಸಿಕೊಂಡು ಅಭಿವೃದ್ಧಿ ಹೊಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ‘ಲಂಟಾನಾ ಗಿಡಗಳಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡುವ ಕೌಶಲಗಳನ್ನು ಬಳಸಿಕೊಂಡು ಬುಡಕಟ್ಟು ಜನರು ಅಭಿವೃದ್ಧಿ ಹೊಂದಬೇಕು’ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.

ತಾಲ್ಲೂಕಿನ ಮೇಲುಕಾಮನಹಳ್ಳಿ ಸಫಾರಿ ಕೌಂಟರ್ ಬಳಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಕೌಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಡಂಚಿನಲ್ಲಿ ವಾಸಿಸುವ ಜನರು ಅರಣ್ಯದಲ್ಲಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು‘ ಎಂದು ಹೇಳಿದರು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಮಾತನಾಡಿ, ‘ಮೊದಲ 15 ದಿನದಲ್ಲಿ ಉತ್ತಮ ಲಾಂಟಾನ ಕಡ್ಡಿಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಬೇಯಿಸಿ ಹದ ಮಾಡಿದ ಸ್ವಚ್ಛಗೊಳಿಸಿ, ಅಳತೆಗೆ ತಕ್ಕಂತೆ ತುಂಡರಿಸಿ ಅವುಗಳನ್ನು ಪಿಠೋಪಕರಣ ಹಾಗೂ ಇತರೆ ಕರಕುಶಲ ವಸ್ತುಗಳ ರೂಪಕ್ಕೆ ಹೇಗೆ ತರುವುದು ಎಂಬುದರ ಬಗ್ಗೆ ಪೂರ್ಣ ತರಬೇತಿ ನೀಡಲಾಗುತ್ತದೆ. ಈ ತರಬೇತಿಯು ಕಚ್ಚಾ ವಸ್ತುಗಳ ಸಂಗ್ರಹಣೆಯಿಂದ ಹಿಡಿದು ಅವುಗಳು ಮಾರುಕಟ್ಟೆ ತಲುಪಿ ಗ್ರಾಹಕರ ಕೈ ಸೇರುವವರೆಗಿನ ಎಲ್ಲಾ ತರಬೇತಿಯನ್ನು ಒಳಗೊಂಡಿರುತ್ತದೆ‘ ಎಂದರು.

ಮಾರುಕಟ್ಟೆ ಅನೂಕೂಲಕ್ಕಾಗಿ ಸಫಾರಿ ಕೇಂದ್ರದ ಬಳಿ ಒಂದು ಹಾಗೂ ಮದ್ದೂರು ತನಿಖಾ ಠಾಣೆಯ ಬಳಿ ಒಂದು ಅಂಗಡಿಗಳನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ತೆರೆದು ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಆರ್ಥಿಕ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯವನ್ನು ಸಮಾಜಮುಖಿಯಾಗಿಸುವ ಜೊತೆಗೆ ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಹಲವಾರು ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಜಿ.ಎಸ್.ಬೆಟ್ಟ ವಲಯ ಭಾಗದ 20 ಜನ ಹಾಗೂ ಮದ್ದೂರು ವಲಯ ವ್ಯಾಪ್ತಿಯ 20 ಜನ, ಒಟ್ಟು 40 ಬುಡಕಟ್ಟು ಜನಾಂಗದವರಿಗೆ 3 ಹಂತದಲ್ಲಿ ಪ್ರತಿ 15 ದಿನಗಳಿಗೆ ಒಂದರಂತೆ ಒಟ್ಟು 45 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಂಡೀಪುರ ಅಭಯಾರಣ್ಯದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರವಿಂದ್ರ, ಕೆ.ಪರಮೇಶ್ ಸೇರಿದಂತೆ ವಲಯ ಅರಣ್ಯಾಧಿಕಾರಿಗಳು, ಬುಡಕಟ್ಟು ಜನಾಂಗದವರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು