ಚಾಮರಾಜನಗರ: ಈದ್ ಉಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ನಗರದಲ್ಲಿ ಸರಳವಾಗಿ ಶುಕ್ರವಾರ ಆಚರಿಸಿದರು.
ಮನೆಮನೆಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು, ಶುಭಾಶಯ ವಿನಿಯಮ ಮಾಡಿಕೊಂಡರು. ಕೊರೊನಾ ಸೋಂಕಿನ ಕಾರಣದಿಂದ ಸಾಮೂಹಿಕ ಪ್ರಾರ್ಥನೆ ನಗರದಲ್ಲಿ ನಡೆಯಲಿಲ್ಲ.
ಕಳೆದ ವರ್ಷವೂ ಹಬ್ಬವನ್ನು ಕೊರೊನಾ ಕಾರಣದಿಂದಾಗಿ ವಿಜೃಂಭಣೆಯಿಂದ ಆಚರಿಸಿರಲಿಲ್ಲ. ಹೊಸ ಬಟ್ಟೆ ಖರೀದಿಗೆ ಜವಳಿ ಅಂಗಡಿಗಳು ಬಂದ್ ಆಗಿದ್ದವು. ಹೀಗಾಗಿ, ಹಲವು ಮಂದಿ ಹೊಸ ಧಿರಿಸಿನಿಂದ ವಂಚಿತರಾದರು.
ಈ ಕುರಿತು ‘ಪ್ರಜಾವಾಣಿ’ ಧರ್ಮಗುರು ಮೌಲಾನಾ ಅಬ್ದುಲ್ ಖಾದೀರ್ ಅವರನ್ನು ಸಂಪರ್ಕಿಸಿದಾಗ, ಅವರು ಹಬ್ಬದ ಸರಳ ಆಚರಣೆ ಎಲ್ಲೆಡೆ ನಡೆದಿದೆ ಎಂದರು.
‘ಈ ಬಾರಿಯೂ ಹಬ್ಬವನ್ನು ಮನೆಯಯಲ್ಲಿಯೇ ಆಚರಿಸಿದ್ದೇವೆ. ಕೊರೊನಾ ವೈರಸ್ನಿಂದ ಮುಕ್ತಿಕೊಡಿ. ಭಾರತದಲ್ಲಿ ಹಾಗೂ ಇಡೀ ವಿಶ್ವದಲ್ಲಿ ಈ ಕೊರೊನಾ ವೈರಸ್ನಿಂದ ಉಂಟಾಗಿರುವ ಎಲ್ಲ ತೊಂದರೆಗಳೂ ನಿವಾರಣೆಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ’ ಎಂದು ಹೇಳಿದರು.
‘ಅನೇಕ ಜನರ ಮನೆಯಲ್ಲಿ ಹೊಸ ಬಟ್ಟೆ ಖರೀದಿಯೇ ನಡೆದಿಲ್ಲ. ಮನೆಯಲ್ಲಿರುವ ಒಂದು ಒಳ್ಳೆಯ ಬಟ್ಟೆಯನ್ನೇ ಹಾಕಿಕೊಂಡು ಹಬ್ಬ ಆಚರಿಸಿಕೊಂಡಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹೇರಿರುವ ಎಲ್ಲ ನಿಯಮಗಳನ್ನು ಪಾಲಿಸಿದ್ದೇವೆ. ಸಾಮೂಹಿಕ ಪ್ರಾರ್ಥನೆ ಈ ಬಾರಿಯೂ ನಡೆದಿಲ್ಲ’ ಎಂದು ತಿಳಿಸಿದರು.
ನಗರದಲ್ಲಿರುವ 20ಕ್ಕೂ ಹೆಚ್ಚು ಮಸೀದಿಗಳಲ್ಲಿ ಧರ್ಮಗುರುಗಳಷ್ಟೇ ಕೋವಿಡ್ ನಿಯಮ ಪಾಲಿಸಿ ಪ್ರಾರ್ಥನೆ ಮಾಡಿದ್ದಾರೆ.