ಚಾಮರಾಜನಗರ: ಜಿಲ್ಲೆಯಾದ್ಯಂತ ಜೈನ ಸಮುದಾಯದವರು ಭಾನುವಾರ ಮಹಾವೀರ ಜಯಂತಿ ಆಚರಿಸಿದರು. ಮನೆಗಳಲ್ಲಿ ಹಾಗೂ ಬಸದಿಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಕೈಗೊಂಡರು.
ನಗರದ ಪಾರ್ಶ್ವನಾಥಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.
ಮಹಾವೀರಸ್ವಾಮಿಗೆ ಪಂಚಾಮೃತ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಜಯಶಾಮಾದೇವಿ ಮಹಿಳಾ ಸಮಾಜದವರಿಂದ ಬಾಲ ಲೀಲಾ ಮಹೋತ್ಸವ ನಡೆಯಿತು. ಜಯಂತಿ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸಂಜೆ ವಿದ್ಯುದೀಪ ಮತ್ತು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಮಹಾವೀರರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪಾರ್ಶ್ವನಾಥ ಜೈನ ಸಂಘದ ಅಧ್ಯಕ್ಷ ಎಂ.ಪಿ.ನಿರ್ಮಲ್ಕುಮಾರ್, ಮುಖಂಡರಾದ ಸಿ.ಪಿ.ಮಹೇಶ್ ಕುಮಾರ್, ಸಿ.ಕೆ.ಸುಭಾಷ್, ಸತೀಶ್ ಕುಮಾರ್ ಜೈನ್, ಜೈಶಾಮಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಶ್ರೀ, ಶ್ವೇತಾಂಬರ ಜೈನ ಸಮಾಜದವರು, ಪಾರ್ಶ್ವನಾಥ ಜೈನ ಸಂಘದ ಸದಸ್ಯರು ಇತರರು ಭಾಗವಹಿಸಿದ್ದರು.