ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ಪಾಲನೆಯಾಗದ ನಿಯಮ, ನಾಮಫಲಕಗಳಲ್ಲಿ ಕಾಣೆಯಾದ ‘ಕನ್ನಡ’

ಕನ್ನಡ ಬಳಸಲು ಸಂಘಟನೆಗಳ ಒತ್ತಾಯ
Published 19 ಮೇ 2024, 6:57 IST
Last Updated 19 ಮೇ 2024, 6:57 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಇರಬೇಕು ಎಂಬ ನಿಯಮವಿದ್ದರೂ ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಹೊರ ರಾಜ್ಯದವರು ನಡೆಸುತ್ತಿರುವ ಉದ್ಯಮಗಳ ಫಲಕಗಳಲ್ಲಿ ಕನ್ನಡ ಭಾಷೆ ಕಾಣಿಸುತ್ತಿಲ್ಲ. 

ಗುಂಡ್ಲುಪೇಟೆ ತಾಲ್ಲೂಕು ಎರಡು ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದ್ದು, ಎರಡು ರಾಜ್ಯಗಳ ಜನರು ಇಲ್ಲಿ ವ್ಯವಹಾರ ನಡೆಸುತ್ತಾರೆ. ಆದರೆ, ಉದ್ಯಮಗಳಲ್ಲಿ ಇಂಗ್ಲಿಷ್‌ ಭಾಷೆಯ ಬೋರ್ಡ್‍ಗಳೇ ಅಧಿಕ ಸಂಖ್ಯೆಯಲ್ಲಿ ರಾರಾಜಿಸುತ್ತಿದೆ. ಇದು ವಿವಿಧ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪುರಸಭೆ ಅಡಳಿತ ಮಂಡಳಿಯವರು ಕನ್ನಡ ನಾಮಫಲಕ ಅಳವಡಿಸಿ ಎಂದು ತಿಳಿಸಿದ್ದಾರೆ. ಆದರೂ ಮಾಲೀಕರು ಫಲಕದಲ್ಲಿ ಕನ್ನಡ ಭಾಷೆಯಲ್ಲಿ ಬರೆಯಲು ಮುಂದಾಗಿಲ್ಲ. ಪಟ್ಟಣ ಸೇರಿದಂತೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವ  ಅಂಗಡಿ, ಹೋಟೆಲ್, ಮಳಿಗೆ, ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಮಾಯವಾಗಿದ್ದು, ಮಲೆಯಾಳ, ಇಂಗ್ಲಿಷ್ ಹಾಗೂ ಹಿಂದಿಮಯವಾಗಿದೆ.

‘ಪಟ್ಟಣದ ಎಂಆರ್‌ಎಫ್‌ ಟಯರ್ಸ್, ಟೀಚರ್ಸ್ ಬಡಾವಣೆ, ಬಿಎನ್‍ಎಸ್ ಬಡಾವಣೆ, ಖಾನ್ ಗುಫಾ ಹೋಟೆಲ್, ಮಿಸ್ಟಿ ರಾಕ್, ಹಂಗಳ ಗ್ರಾಮದ ಶ್ರೀವಿನಾಯಕ ಲಾಡ್ಜ್ ಅಂಡ್ ರೆಸ್ಟೋರೆಂಟ್, ಫುಡ್ ಕ್ಯಾಪಿಟಲ್ ಸೇರಿದಂತೆ ಅನೇಕ ವಾಣಿಜ್ಯ ಕಟ್ಟಡಗಳಲ್ಲಿ ಕನ್ನಡ ಬಳಸದೆ ಇಂಗ್ಲಿಷ್ ಭಾಷೆಯ ನಾಮಫಲಕಗಳನ್ನು ಅಳವಡಿಸಲಾಗಿದೆ’ ಎಂದು ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ದೂರಿದ್ದಾರೆ. 

ಹಲವೆಡೆ ಇಂಗ್ಲಿಷ್ ಹಾಗೂ ಕನ್ನಡ ಎರಡು ಭಾಷೆಯಲ್ಲೂ ನಾಮಫಲಕಗಳಿವೆ. ಆದರೆ, ಇಂಗ್ಲಿಷ್ ಅಕ್ಷರಗಳನ್ನು ದೊಡ್ಡದಾಗಿ ಬರೆದು ಕನ್ನಡ ಪದಗಳನ್ನು ಕಾಣದ ಹಾಗೆ ಹಾಕಲಾಗಿದೆ. ಇನ್ನೂ ಕೆಲವೆಡೆ ಶೇ 50:50ರ ಅನುಪಾತದಲ್ಲಿ ನಾಮಫಲಕಗಳನ್ನು ಬರೆಯಲಾಗಿದೆ. 

‘ತಾಲ್ಲೂಕಿನಲ್ಲಿ ವ್ಯವಹಾರ ಮಾಡುವುದಕ್ಕೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದರ ಜೊತೆಗೆ ಫಲಕ‌ಗಳಿಗೆ ಮಸಿ ಬಳಿಯಲಾಗುತ್ತದೆ’ ಎಂದು ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಮಲಿಕ್ ಎಚ್ಚರಿಕೆ ನೀಡಿದರು.

‌ಈ ಬಗ್ಗೆ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ‘ಈಗಾಗಲೇ ಎಲ್ಲರಿಗೂ ನೋಟಿಸ್‌ ಕಳುಹಿಸಿದ್ದೇವೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಡವಾಗಿದೆ. ಫಲಕಗಳಲ್ಲಿ ಕನ್ನಡ ಬಳಕೆ ಮಾಡದೆ ಇದ್ದರೆ ಉದ್ದಿಮೆಗಳ ಪರವಾನಿಗೆ ಅಮಾನತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

‘ನಿಯಮ ಪಾಲಿಸದಿದ್ದರೆ ಹೋರಾಟ’

‘ಗುಂಡ್ಲುಪೇಟೆ ತಾಲ್ಲೂಕು ತಮಿಳುನಾಡು ಹಾಗೂ ಕೇರಳ ಎರಡು ಗಡಿ ಹಂಚಿಕೊಂಡಿದ್ದು ಅನ್ಯ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರದ ನಿಮಿತ್ತ ಇಲ್ಲಿಗೆ ಬರುತ್ತಾರೆ. ಅಂತಹವರ ಜೊತೆಗೆ ಇಲ್ಲಿನ ಜನರು ಅವರ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ನಮ್ಮ ತಾಯಿ ಭಾಷೆಯಲ್ಲಿ ಮಾತನಾಡಿ ಕನ್ನಡ ಕಲಿಸಬೇಕು. ಜೊತೆಗೆ ನಾಮ ಫಲಕದಲ್ಲಿ ಕನ್ನಡ ಭಾಷೆ ಶೇ 60ರಷ್ಟು ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಕರುನಾಡ ಯುವಶಕ್ತಿ ಸಂಘಟನೆ ತಾಲ್ಲೂಕು ಅಧ್ಯಕ್ಷ ಮುನೀರ್ ಪಾಷಾ ‘ಪ್ರಜಾವಾಣಿ’ಗೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT