ಚಾಮರಾಜನಗರ: ಮೇ 9ರಂದು ಚುನಾವಣೆ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಅವರು ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ಭಾನುವಾರ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಸಮಿತಿಯ ಮುಖಂಡರು ನಗರದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದು, ಚುನಾವಣೆಗೆ ಸ್ಪರ್ಧಿಸುವಂತೆ ನರಸಿಂಹಮೂರ್ತಿ ಅವರಿಗೆ ಸಲಹೆ ನೀಡಿದ್ದಾರೆ.
ಸಭೆಯ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನರಸಿಂಹಮೂರ್ತಿ ಅವರು, ‘ಕಸಾಪದ ಹಿರಿಯ ಸದಸ್ಯರೆಲ್ಲ ಸೇರಿ ಚರ್ಚೆ ಮಾಡಿದ್ದೇವೆ. ನನ್ನ ಸ್ಪರ್ಧೆಗೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಲ್ಲರ ಅಭಿಪ್ರಾಯವಾಗಿತ್ತು. ಇದರ ಆಧಾರದಲ್ಲೇ ಮತ ಕೇಳುತ್ತೇನೆ. ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಹೇಳಿದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಚಿನ್ನಮ್ಮ, ಪಿ.ಎಂ.ವೆಂಕಟೇಶ್, ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ, ಕೃಷ್ಣಸ್ವಾಮಿ ನಾಯಕ, ಬಂಗಾರಸ್ವಾಮಿ, ದೊಡ್ಡಗವಿಬಸಪ್ಪ, ಶಂಕರ ಅಂಕನಶೆಟ್ಟಿ, ಬಿ.ಬಸವರಾಜು, ಕಲೆ ನಟರಾಜು, ಸಿ.ಎಂ.ಕೃಷ್ಣಮೂರ್ತಿ ಮತ್ತಿತರರು ಇದ್ದರು.