ಕೊಳ್ಳೇಗಾಲ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ– ಹಸಿರು ಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ಮಾಡಿದರು.
ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ನಗರದ ಎಂಜಿಎಸ್ವಿ ರಸ್ತೆ, ಡಾ. ರಾಜಕುಮಾರ್ ರಸ್ತೆ, ಡಾ. ಬಿಆರ್ ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಬಂದು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ರೈತ ಸಂಘದ ಮುಖಂಡ ರಾಮಸ್ವಾಮಿ ಮಾತನಾಡಿ, ಮಳೆಯಾಗದೆ ಜಿಲ್ಲೆಯ ರೈತರು ಪ್ರತಿನಿತ್ಯ ಪರದಾಡುತ್ತಿದ್ದಾರೆ ಹಾಗಾಗಿ ನಮ್ಮ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು. 25 ವರ್ಷಗಳಿಂದ ಅನೇಕ ಗ್ರಾಮಗಳಲ್ಲಿ ಕರ ನಿರಾಕರಣೆ ಚಳುವಳಿ ನಡೆಯುತ್ತಿದ್ದು ಹಿಂದಿನ ಹಳೆಯ ವಿದ್ಯುತ್ ಬಾಕಿಯನ್ನು ಸರ್ಕಾರ ಮನ್ನಾ ಮಾಡಬೇಕು. ಕಾಡಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಬೆಳೆ ಹಾನಿಯಾಗುತ್ತಿದ್ದರಿಂದ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಜೊತೆಗೆ ಸರ್ಕಾರದಿಂದ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
‘ಕಬ್ಬಿನ ಕಟಾವು ಹಾಗೂ ಬೆಲೆ ಸಂಬಂಧಿಸಿದ ವಿಚಾರ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ರೈತರ ಸಭೆ ಕರೆಯಬೇಕು. ತಾಲ್ಲೂಕಿನ ನಿವಾಸಿಗಳಿಗೆ ಮನೆ ನಿರ್ಮಿಸಲು ಮರಳನ್ನು ಎತ್ತಿನಗಾಡಿಗಳಲ್ಲಿ ಸಾಗಣೆ ಮಾಡಲು ಎತ್ತಿನಗಾಡಿಯವರಿಗೆ ಅವಕಾಶ ಮಾಡಿಕೊಡಬೇಕು. ಮಳೆಕೊರತೆಯಿಂದ ಫಸಲು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇನ್ನೂ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಮಹೇಶ್ ರವರಿಗೆ ಮನವಿ ಮಾಡಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಉಪವಿಭಾಗಾಧಿಕಾರಿ ಮಹೇಶ್ ಮಾತನಾಡಿ, ಒಂದು ವಾರ ಕಾಲಾವಕಾಶ ಕೊಡಿ ಮೇಲಾಧಿಕಾರಿಗಳ ಸಮ್ಮುಖದಲ್ಲಿ ರೈತರಿಗೆ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದಾಗ ರೈತರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಷಣ್ಮುಗಸ್ವಾಮಿ, ಕಾರ್ಯದರ್ಶಿ ಮೋಳೆ ರಾಮಕೃಷ್ಣ, ಹಿರಿಯ ಮುಖಂಡ ಅಣಗಳ್ಳಿ ಬಸವರಾಜು, ಲಕ್ಷ್ಮಣಮೂರ್ತಿ, ದಶರಥ, ಮಹದೇವಪ್ಪ ಸೇರಿದಂತೆ ಅನೇಕರು ಹಾಜರಿದ್ದರು.