ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ

Last Updated 24 ನವೆಂಬರ್ 2021, 15:08 IST
ಅಕ್ಷರ ಗಾತ್ರ

ಜೋಡಿ ರಸ್ತೆಯ ಚರಂಡಿ ಸರಿಪಡಿಸಿ

ಚಾಮರಾಜನಗರದಲ್ಲಿ ಸ್ವಲ್ಪ ಹೊತ್ತು ಧಾರಾಕಾರ ಮಳೆ ಬಂದರೆ ಸಾಕು; ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟಿನ ಎದುರು ಚರಂಡಿ ನೀರು ರಸ್ತೆಗೆ ಉಕ್ಕಿ ಹರಿದು ಆವಾಂತರ ಸೃಷ್ಟಿಸುತ್ತದೆ.

ಕಳೆದ ವಾರ ನಿರಂತರವಾಗಿ ಸುರಿದ ಮಳೆಗೆ ಪ್ರತಿ ದಿನ ಜನರು ರಸ್ತೆಯಲ್ಲಿ ಓಡಾಡಲು ಕಿರಿಕಿರಿ ಅನುಭವಿಸಿದ್ದಾರೆ. ರಸ್ತೆಯ ಉಳಿದ ಕಡೆಗಳೆಲ್ಲಾ ಕಾಂಕ್ರೀಟ್‌ ಚರಂಡಿಯಾಗಿದೆ. ಇಲ್ಲಿ ಕೆಲವು ಅಡಿಗಳಷ್ಟು ದೂರಕ್ಕೆ ಆಗಿಲ್ಲ. ಇದರಿಂದಾಗಿ ಈ ಸಮಸ್ಯೆಯಾಗುತ್ತಿದೆ. ಇರುವ ಚರಂಡಿಯನ್ನಾದರೂ ಸ್ವಲ್ಪ ಅಗಲ ಮಾಡಿ ನೀರು ಸರಾಗವಾಗಿ ಹರಿಯುವುದಕ್ಕೆ ನಗರಸಭೆ ಕ್ರಮ ಕೈಗೊಂಡಿಲ್ಲ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಇದರ ಬಗ್ಗೆ ಗಮನಹರಿಸಿ ವ್ಯವಸ್ಥಿತ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

–ನಂದೀಶ ಕೆ.ಜಿ., ಕೊತ್ತಲವಾಡಿ, ಚಾಮರಾಜನಗರ ತಾಲ್ಲೂಕು

ಕಳಪೆ ಕಾಮಗಾರಿ

ಗುಂಡ್ಲುಪೇಟೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳ ಕಾಮಗಾರಿ ಕಳಪೆಯಾಗಿದ್ದು, ಮೇಲೆ ಹಾಕಲಾಗಿರುವ ಚಪ್ಪಡಿ ಬೀಳುತ್ತಿದೆ. ಈ ಬಗ್ಗೆ ಪುರಸಭೆ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ. ಜನರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚಪ್ಪಡಿ ಕಲ್ಲು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಇದರ ದುರಸ್ತಿಗೆ ಪುರಸಭೆ ಕ್ರಮ ಕೈಗೊಳ್ಳಬೇಕು.

– ಬಿ.ಎಂ.ಮಂಜಪ್ಪ,ಶಿವಪುರ ಗ್ರಾಮ

ತೊಂಬೆಗೆ ನೀರು ತುಂಬಿಸಿ

ಸಂತೇಮರಹಳ್ಳಿಯ ಶಂಭು ಬಡಾವಣೆಯಲ್ಲಿರುವ ಕಿರು ನೀರು ಸರಬರಾಜು ಘಟಕದ ತೊಂಬೆಗೆ ಗ್ರಾಮ ಪಂಚಾಯಿತಿಯು ನೀರು ತುಂಬಿಸುತ್ತಿಲ್ಲ.ಎರಡು ವರ್ಷಗಳಿಂದ ತೊಂಬೆ ಅನಾಥವಾಗಿ ನಿಂತಿದೆ. ಕುಡಿಯುವ ನೀರು ಕೆಲವು ಮನೆಗಳಿಗೆ ಸಮರ್ಪಕವಾಗಿ ಬರುತ್ತಿಲ್ಲ. ತೊಂಬೆಗೆ ನೀರು ತುಂಬಿಸಿದರೇ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡಿದ್ದರೂ ಗಮನ ಹರಿಸಿಲ್ಲ. ಇನ್ನಾದರೂ ಗ್ರಾಮ ಪಂಚಾಯಿತಿಯು ತೊಂಬೆಗೆ ನೀರು ತುಂಬಿಸಲು ಮುಂದಾಗಬೇಕು.

–ಮಹೇಶ್‌, ಸಂತೇಮರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT