ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಬೆಲೆ ಇಲ್ಲದೆ ಮರದಲ್ಲೇ ಕೊಳೆಯುತ್ತಿದೆ ಪಪ್ಪಾಯ, ಬೇಸಾಯ ಕೈಬಿಡಲು ನಿರ್ಧಾರ

ತಾಲ್ಲೂಕಿನ ರೈತ ಮಾರಪ್ಪಗೌಂಡರ್‌ಗೆ ನಷ್ಟ, ಪರಿಹಾರಕ್ಕೆ ಆಗ್ರಹ
Last Updated 27 ಜುಲೈ 2020, 13:37 IST
ಅಕ್ಷರ ಗಾತ್ರ

ಹನೂರು: ‘ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಗೊಬ್ಬರ, ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿಬೆಳೆದಿದ್ದ ಪರಂಗಿ ಹಣ್ಣನ್ನು (ಪಪ್ಪಾಯಿ) ಕೊಳ್ಳುವವರಿಲ್ಲದೇ ಕೊಳೆತು ಹೋಗುತ್ತಿದೆ. ಇತ್ತ ಬೆಳೆದ ಫಸಲಿಗೆ ಹಣವೂ ಇಲ್ಲದೇ ಪರಿಹಾರವೂ ಇಲ್ಲದೇ ಕೃಷಿಯನ್ನೇ ಕೈಬಿಡಬೇಕು ಎಂದು ನಿರ್ಧರಿಸಿದ್ದೇನೆ’ ಎಂದು ತಾಲ್ಲೂಕಿನ ಬಿ. ಗುಂಡಾಪುರ ಗ್ರಾಮದ ರೈತ ಮಾರಪ್ಪಗೌಂಡರ್ ‘ಪ್ರಜಾವಾಣಿ’ಯೊಂದಿಗೆಅಳಲು ತೋಡಿಕೊಂಡರು.

ತಮಿಳುನಾಡಿನಿಂದ 50 ವರ್ಷಗಳ ಹಿಂದೆ ಬಂದ ಮಾರಪ್ಪಗೌಂಡರ್ ಗುಂಡಾಪುರ ಗ್ರಾಮದಲ್ಲಿ ಜಮೀನು ಖರೀದಿಸಿ ಕುಟುಂಬದವರ ಜೊತೆ ಕೃಷಿ ಮಾಡುತ್ತಿದ್ದಾರೆ.

ನೀರಾವರಿ ಜಮೀನಿನ ಮೂರು ಎಕರೆಯಲ್ಲಿ ಪಪ್ಪಾಯಿಯನ್ನು ಬೆಳೆದಿದ್ದರು. ಕೋವಿಡ್‌–19 ಪರಿಣಾಮದಿಂದಾಗಿ ಸೂಕ್ತ ಬೆಲೆಯಿಲ್ಲದೇ ಹಣ್ಣು ಮರದಲ್ಲೇ ಕೊಳೆಯುತ್ತಿವೆ. ಈಚೆಗೆ ಬೀಸಿದ ಭಾರಿ ಗಾಳಿಗೆ ಕೆಲವು ಮರಗಳು ಧರೆಗುರುಳಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

‘ಕೊರೊನಾದಿಂದ ಇಂತಹ ದುಃಸ್ಥಿತಿ ಬರುತ್ತದೆ ಎಂದಿದ್ದರೆ ನಾವು ಬೇಸಾಯವನ್ನೇ ಮಾಡುತ್ತಿರಲಿಲ್ಲ. ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅರಿತು ಮಾಹಿತಿ ಪಡೆದು ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಪರಿಹಾರ ದೊರಕಿಲ್ಲ. ನಾವು ಖರ್ಚು ಮಾಡಿದ ಹಣವು ಕೈ ಸೇರದಂತಾಗಿದೆ. ಇಂದಿಗೂ ಜಮೀನಿನಲ್ಲಿ ಪರಂಗಿ ಬೆಳೆ ಹಾಗೇಯೆ ಇದ್ದು, ಪಕ್ಷಿಗಳು ತಿನ್ನುತ್ತಿವೆ. ಅಧಿಕಾರಿಗಳು ಪರಿಹಾರ ಕೊಡಿಸಬೇಕು’ ಎಂದು ಮಾರಪ್ಪಗೌಂಡರ್‌ ಹೇಳಿದರು.

ಬಾಳೆ ಧರೆಗುರುಳಿತ್ತು: ಕಳೆದ ವರ್ಷ ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಕಟಾವಿಗೆ ಬರುವ ವೇಳೆಗೆ ಗಾಳಿ ಬೀಸಿದ ಪರಿಣಾಮ ಗಿಡಗಳು ನೆಲಕ್ಕುರುಳಿದ್ದವು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವರ್ಷದಿಂದ ಕಾಪಾಡಿದ್ದ ಫಸಲು ಇನ್ನೇನು ಕಟಾವಿಗೆ ಬರಬೇಕು ಎನ್ನುವ ಹೊತ್ತಿಗೆ ಮಣ್ಣು ಪಾಲಾಗಿತ್ತು. ಈಗ ಇರುವ ಅಲ್ಪ ಜಮೀನಿನಲ್ಲಿ ಪರಂಗಿ ಹಾಗೂ ಜೋಳದ ಫಸಲು ಬೆಳೆದಿದ್ದೆ. ಈಗ ಅದನ್ನೂ ಕೊಳ್ಳುವವರಿಲ್ಲದೇ ಕಂಗಾಲಾಗಿದ್ದೇನೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ನನಗೆ ಮೇಲಿಂದ ಮೇಲೆ ಹೀಗೆ ನಷ್ಟ ಉಂಟಾದರೆ ಬದುಕುವುದಾದರೂ ಹೇಗೆ’ ಎಂಬುದು ಮಾರಪ್ಪಗೌಂಡರ್ ಪ್ರಶ್ನೆ.

‘ಕಳೆದ ವರ್ಷ ಬಾಳೆ ನಷ್ಟ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳು ಫೋಟೋ ತೆಗೆದು ದಾಖಲಾತಿ ಪಡೆದು ನಷ್ಟ ಪರಿಹಾರ ನೀಡುತ್ತೇವೆ ಎಂದು ಹೋದರೂ ಇದುವರೆಗೆ ಪರಿಹಾರವೂ ಸಿಕ್ಕಿಲ್ಲ. ಇರುವ ಅಲ್ಪ ಜಮೀನಿನನ್ನು ನಂಬಿ ಇಡೀ ಕುಟುಂಬ ಬದುಕುತ್ತಿದೆ. ಕೃಷಿಗಾಗಿ ಕೈಸಾಲ ಮಾಡಿ ಬೇಸಾಯ ಮಾಡುತ್ತೇವೆ. ಆದರೆ, ಬೆಳೆದ ಫಸಲು ಕೈಗೆ ಬರುವ ಹೊತ್ತಿಗೆ ಪ್ರಕೃತಿ ವಿಕೋಪದಿಂದ ಹಾನಿಯಾದರೆ ಬೆಲೆಯಿಲ್ಲದೇ ಹೋದರೆ ನಮ್ಮ ಪಾಡೇನು. ಅಧಿಕಾರಿಗಳು ಕೃಷಿಯಲ್ಲಿ ನಷ್ಟ ಅನುಭವಿಸಿದ ಅರ್ಹ ರೈತರನ್ನು ಗುರುತಿಸಿ ಪರಿಹಾರ ನೀಡುವಂತಾಗಬೇಕು. ಮೇಲೀಂದ ಮೇಲೆ ನಷ್ಟ ಅನುಭವಿಸುತ್ತಿದ್ದರೂ ಇದುವರೆಗೂ ಪರಿಹಾರ ನೀಡದೇ ಇರುವ ಕೃಷಿ ಇಲಾಖೆ ಕೂಡಲೇ ಜಮೀನಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಾರೆ ಮಾರಪ್ಪಗೌಂಡರ್.

‘ಅರ್ಜಿ ಹಾಕಿದರೆ ಪರಿಹಾರಕ್ಕೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್‌ ಅವರು, ‘ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಾಶವಾಗಿದ್ದ ಬಾಳೆ ಫಸಲಿಗೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ನೀಡುತ್ತಾರೆ. ನಾವು ಫಸಲು ನಾಶವಾಗಿದೆ ಎಂದು ವರದಿ ನೀಡುತ್ತೇವೆ ಅಷ್ಟೆ. ಲಾಕ್‌ಡೌನ್‌ ಸಂದರ್ಭದಲ್ಲಿತೋಟಗಾರಿಕೆ ಬೆಳೆ ನಷ್ಟಕ್ಕೆ ಪ್ರತಿ ಎರಡೂವರೆ ಎಕರೆಗೆ ₹15 ಸಾವಿರ ಪರಿಹಾರ ನೀಡಲು ಸರ್ಕಾರ ಸೂಚಿಸಿದೆ. ಮಾರಪ್ಪಗೌಂಡರ್ ಅವರ ಜಮೀನಿನಲ್ಲಿ ಈ ಬಾರಿ ಪಪ್ಪಾಯಿ ಬೆಳೆ ನಾಶವಾಗಿರುವ ಬಗ್ಗೆ ಮಾಹಿತಿ ಇಲ್ಲ. ತೋಟಗಾರಿಕೆ ಬೆಳೆ ನಾಶವಾಗಿರುವ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಅಲ್ಲದೇ, ಬೆಳೆ ನಷ್ಟವಾಗಿರುವ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ವೆ ಕಾರ್ಯ ಅಥವಾ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೆ ಸೂಕ್ತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT