ಯಳಂದೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ವನಿತೆಯರ ಒಳಗೊಳ್ಳುವಿಕೆಗೆ ಉತ್ತೇಜನ ನೀಡಲು ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಇಲಾಖೆ ಮಹಿಳಾ ಕಾಯಕೋತ್ಸವ ಯೋಜನೆ ಜಾರಿಗೊಳಿಸಿದ್ದು,ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳಲ್ಲಿ ದುಗ್ಗಹಟ್ಟಿ ಮತ್ತು ಅಗರ ಗ್ರಾಮಪಂಚಾಯಿತಿಗಳು ಈ ಯೋಜನೆಯ ವ್ಯಾಪ್ತಿಗೆ ಸೇರಿರಲಿಲ್ಲ. ಹಾಗಾಗಿ, ಮತ್ತೆ ಈ
ಪಂಚಾಯಿತಿಗಳಲ್ಲಿ ಚಾಲನೆ ನೀಡಲಾಗಿದೆ.
ಗ್ರಾಮದಲ್ಲಿ ಮಹಿಳಾ ಪ್ರಧಾನ ಕುಟುಂಬಗಳನ್ನುಗುರುತಿಸುವುದು, ಕಾಮಗಾರಿ ಆಯೋಜಿಸುವ ಪ್ರದೇಶವನ್ನು ತಾಯಂದಿರ ಮತ್ತು ಶಿಶುಸ್ನೇಹಿಯಾಗಿ ಪರಿವರ್ತಿಸುವುದು ಇದರ ಉದ್ದೇಶ ಹಾಗೂ ಪಂಚಾಯಿತಿ ವ್ಯಾಪ್ತಿಯ100ಕ್ಕೂ ಹೆಚ್ಚು ಮಹಿಳಾ ಸ್ವ ಸ್ವಹಾಯ ಸಂಘಗಳನ್ನು ಗುರುತಿಸಿ, ಆಸಕ್ತರಿಗೆ ಉದ್ಯೋಗನೀಡುವ ಗುರಿಯೂ ಸೇರಿದೆ.
‘ಗ್ರಾಮೀಣ ಪ್ರದೇಶದಲ್ಲಿ ಕೋವಿಡೋತ್ತರ ಕಾಲದ ಸಂಕಷ್ಟಗಳನ್ನು ನಿವಾರಿಸುವುದು. ಗುಳೆಹೋಗುವುದನ್ನು ತಪ್ಪಿಸುವುದು, ಲಿಂಗ ತಾರತಮ್ಯ ನಿವಾರಣೆ, ಸಮಾನ ಕೂಲಿ, ಗ್ರಾಮೀಣಅಭಿವೃದ್ಧಿ ಮತ್ತು ಕೆರೆ-ಕಟ್ಟೆಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲು ಅವಕಾಶಕಲ್ಪಿಸಲಾಗಿದೆ. ಕಾಯಕ ಮಾಡಲು ಮುಂದೆ ಬರುವವರ ಬೇಡಿಕೆ ಪಡೆದು, ಆಗಿಂದಾಗ್ಗೆಕೂಲಿ ನೀಡುವ ಮೂಲಕ ಭಗಿನಿಯರ ಉದ್ಯೋಗಕ್ಕೆ ಒತ್ತು ನೀಡಲಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮೂರು ಸುತ್ತಮುತ್ತವೇ ಪ್ರತಿ ದಿನ ದುಡಿಮೆಗೆ ಹೆಚ್ಚಿನ ಅವಕಾಶ ಲಭಿಸಿದೆ. ಅಸಂಘಟಿತಮಹಿಳೆಯರು ಮತ್ತು ಯುವತಿಯರ ದೈನಂದಿನ ಉದ್ಯೋಗಕ್ಕೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿವರವಾಗಿದೆ’ ಎಂದು ದುಗ್ಗಹಟ್ಟಿ ಗೌರಮ್ಮ ಹೇಳಿದರು.
‘ಕಾಯಕೋತ್ಸವಕ್ಕೆ ನಮ್ಮ ಪಂಚಾಯಿತಿಯೂ ಆಯ್ಕೆ ಆಗಿದೆ. ಸ್ತ್ರೀಯರ ಸಬಲೀಕರಣ ಮತ್ತುಮಹಿಳಾ ಸಂಘಗಳ ಸದಸ್ಯರ ಪಾಲ್ಗೊಳ್ಳುವಿಕೆಗೂ ಅವಕಾಶ ಕಲ್ಪಿಸಿದೆ. ಇದರಿಂದ ದೈನಂದಿನಆದಾಯ ಕೈಸೇರಲಿದೆ’ ಎಂದು ಕಂದಹಳ್ಳಿ ಸಿದ್ದಮ್ಮ ತಿಳಿಸಿದರು.
ಕೆರೆ ಅಭಿವೃದ್ಧಿಗೆ ಒತ್ತು
ದುಗ್ಗಹಟ್ಟಿ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಗ್ರಾಮಗಳ ಕ್ಲಸ್ಟರ್ ರಚಿಸಿ, 7,000 ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ. ಮೆಲ್ಲಹಳ್ಳಿ, ಕಂದಹಳ್ಳಿ, ವೈ.ಕೆ.ಮೋಳೆಗ್ರಾಮಗಳಲ್ಲಿ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರತಿ ದಿನ 750 ಜನರುದುಡಿಯುತ್ತಿದ್ದು, ಖಾತ್ರಿ ಯೋಜನೆಯಲ್ಲಿ ದುಡಿಯುವವರಿಗೆ ದಿನಕ್ಕೆ ₹ 289 ಕೂಲಿಸಿಗಲಿದೆ.
‘ಮಹಿಳೆಯರ ಪಾಲು ಶೇ 60 ಅನ್ನು ಮೀರಿದ್ದು, ಮತ್ತೆ ಶೇ 5ರಷ್ಟು ಹೆಚ್ಚಿಸುವಗುರಿಯನ್ನು ಹೊಂದಲಾಗಿದೆ. ಈಗಾಗಲೇ ಕುಟುಂಬಗಳ ಸಮೀಕ್ಷೆ ಆರಂಭವಾಗಿದ್ದು, ದುಡಿಯಲುಇಚ್ಚಿಸುವ ಮಂದಿಗೆ ಕೆಲಸ ನೀಡುವ ಕಾಯಕಕ್ಕೆ ಚಾಲನೆ ನೀಡಲಾಗುವುದು. ದುಗ್ಗಹಟ್ಟಿ ಕೆರೆಅಂದಾಜು ₹ 7.25 ಲಕ್ಷ, ಮೆಲ್ಲಹಳ್ಳಿ ದೊಡ್ಡಕೆರೆ ₹ 10 ಲಕ್ಷ, ಕಂದಹಳ್ಳಿ ₹ 10ಲಕ್ಷ, ಯಂಗಯ್ಯನ ಕೆರೆ ಮೋಳೆಯಲ್ಲಿ ₹ 5 ಲಕ್ಷ ವೆಚ್ಚದ ಕಾಮಗಾರಿ ನಡೆದಿದೆ’ ಎಂದು ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಿವಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.