ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ವ್ಯವಸ್ಥೆ: ಇಲ್ಲಿ ಹೇಳೋರಿಲ್ಲ, ಕೇ‌ಳೋರೂ ಇಲ್ಲ

ಗುಂಡ್ಲುಪೇಟೆ: ಎಲ್ಲೆಂದರಲ್ಲಿ ವಾಹನ ನಿಲುಗಡೆ, ಜನಸಾಮಾನ್ಯರಿಗೆ ತೊಂದರೆ, ವರ್ತಕರಿಂದ ಪಾದಚಾರಿ ಮಾರ್ಗ ಒತ್ತುವರಿ
Last Updated 2 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕೊಂಡಿಯಾಗಿರುವ ಗುಂಡ್ಲುಪೇಟೆ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿಲ್ಲ.ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಹಾಗೂ ಪಾದಚಾರಿ ಮಾರ್ಗಗಳ ಅತಿಕ್ರಮಣದಿಂದಾಗಿ ಸಂಚಾರ ದುಸ್ತರವಾಗಿದೆ.

ತಾಲ್ಲೂಕು ಕೇಂದ್ರವಾಗಿರುವ ಪಟ್ಟಣವುನೆರೆಯ ರಾಜ್ಯಗಳಿಗೆ ಹೊಂದಿಕೊಂಡಂತಿರುವ ಕಾರಣಕ್ಕಾಗಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಬಂಡೀಪುರ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಊಟಿ, ವಯನಾಡು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಪಟ್ಟಣದಲ್ಲೇ ಹಾದು ಹೋಗುವುದರಿಂದ ಇಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಆದರೆ, ಸಂಚಾರ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಸರಿಯಾಗಿಲ್ಲ.

ಪಟ್ಟಣದ ಮಟ್ಟಿಗೆ ಸಂಚಾರ ನಿಯಮಗಳು ಕಾಗದದಲ್ಲಿ ಮಾತ್ರ ಇವೆ! ಹೆಚ್ಚಿನ ವಾಹನ ಸವಾರ ನಿಯಮಗಳ ಬಗ್ಗೆ ಅರಿವು ಇದ್ದಂತಿಲ್ಲ. ಗೊತ್ತಿದ್ದವರೂ ಪಾಲಿಸುವ ಗೋಜಿಗೆ ಹೋಗುತ್ತಿಲ್ಲ. ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಈ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಪ್ರಜ್ಞಾವಂತರ ಆರೋಪ.

ಸಂಚಾರ ಠಾಣೆ ಇಲ್ಲ

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 67 ಮತ್ತು 766 ಹಾದು ಹೋಗುತ್ತವೆ. ದಿನಂಪ್ರತಿ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಸಂಚಾರ ಪೊಲೀಸ್‌ ಠಾಣೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಪೊಲೀಸರೇ ಇತರೆ ಕೆಲಸದೊಂದಿಗೆ ಸಂಚಾರ ನಿಯಂತ್ರಣದ ಕರ್ತವ್ಯವನ್ನೂ ನಿಭಾಯಿಸಬೇಕು.

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷಿದ್ಧ (ನೋ ಪಾರ್ಕಿಂಗ್) ಫಲಕ ಹಾಕಿದ್ದರೂ, ಅದನ್ನು ಪಾಲಿಸುವವರು ಇಲ್ಲ. ಪಾಲಿಸುವಂತೆ ಮಾಡಬೇಕಾದ ಪೊಲೀಸರೂ ಇಲ್ಲ. ಸವಾರರು ಎಲ್ಲೆಂದರೆ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ.

‘ವಾಹನಗಳ ದಟ್ಟಣೆಯನ್ನು ತಡೆಯಲು ಏಕಮುಖ ಸಂಚಾರ ನಿಯಮ ಇದ್ದರೂ ಪಾಲನೆಯಾಗುತ್ತಿಲ್ಲ. ತಮಗೆ ಇಷ್ಟ ಬಂದ ರಸ್ತೆಯಲ್ಲಿ ಬರುತ್ತಾರೆ, ಹೋಗುತ್ತಾರೆ ಇದಕ್ಕೆ ಪೊಲೀಸರು ಕಡಿವಾಣ ಹಾಕುತ್ತಿಲ್ಲ’ ಎಂದು ಆರೋಪಿಸುತ್ತಾರೆ ಸ್ಥಳೀಯ ನಿವಾಸಿಗಳು.

ಪೊಲೀಸರು ನಿಯಮ ಪಾಲನೆಗೆ ಕ್ರಮ ಕೈಗೊಂಡರೆ, ಒಂದಷ್ಟು ದಿನಗಳ ಕಾಲ ಎಲ್ಲವೂ ಸರಿಯಾಗಿರುತ್ತದೆ. ಮತ್ತೆ ಎಂದಿನಂತೆಯೇ ಪುನರಾವರ್ತನೆಯಾಗುತ್ತದೆ. ಸೂಚನಾ ಫಲಕಗಳನ್ನು ಅಳವಡಿಸಿದರೆ ಅದನ್ನು ಕಿತ್ತು ಹಾಕುವವರೂ ಇಲ್ಲಿದ್ದಾರೆ.

‘ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಮನಸೋ ಇಚ್ಛೆ ನಿಲ್ಲಿಸುತ್ತಾರೆ. ಏಕ ಮುಖ ಸಂಚಾರ ಇದ್ದರೂ ಎದುರು ಬದುರಾಗಿ ಸವಾರರು ಬರುತ್ತಾರೆ. ಇದರಿಂದ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುವುದಕ್ಕೆ ಭಯವಾಗುತ್ತದೆ’ ಎಂದು ಪಟ್ಟಣದ ನಿವಾಸಿ ಮೋಹನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಾಹನ ನಿಲುಗಡೆ ಜಾಗ ಇಲ್ಲ: ಪುರಸಭೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸರಿಯಾದ ಜಾಗ ಇಲ್ಲದಿರುವುದರಿಂದ ಈ ಸಮಸ್ಯೆ ಎದುರಾಗುತ್ತಿದೆ ಎಂಬುದು ಸವಾರರ ಮಾತು. ನಿರ್ದಿಷ್ಟ ಜಾಗ ಗುರುತಿಸಿ ಅಲ್ಲಿಯೇ ವಾಹನ ನಿಲುಗಡೆಗೆ ಅವಕಾಶ ನೀಡಿದರೆ, ಸಮಸ್ಯೆ ಉದ್ಭವಿಸುವುದಿಲ್ಲ. ಪುರಸಭೆ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

ಪಾದಚಾರಿ ಮಾರ್ಗ ಒತ್ತುವರಿ

ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಪಾದಚಾರಿ ಮಾರ್ಗಗಳ ಒತ್ತುವರಿ, ಪಟ್ಟಣದ ಜನರು ಎದುರಿಸುತ್ತಿರುವ ಮತ್ತೊಂದು ಸಮಸ್ಯೆ. ಕೆಲವು ವರ್ತಕರು, ಜನರಿಗೆ ಓಡಾಡಲು ಮೀಸಲಾಗಿರುವ ಜಾಗವನ್ನು ತಮ್ಮ ಮಳಿಗೆಗಳ ಸರಕುಗಳನ್ನು ಇಡಲು ಬಳಸುತ್ತಿದ್ದಾರೆ.

ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಪಾದಚಾರಿ ಮಾರ್ಗಕ್ಕೆ ಹಾಕಿರುವ ತಡೆಕಂಬಿಗಳನ್ನು ಕೆಲ ವರ್ತಕರು ತಮ್ಮ ಅಂಗಡಿಯ ವಸ್ತುಗಳನ್ನು ಇಡಲು ಬಳಸಿಕೊಂಡಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಹಿಂದಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಅತಿಕ್ರಮಣ ತೆರವು ಮಾಡುವ ಕೆಲಸ ಆಗಿಲ್ಲ.

ಇನ್ನೂ ಕೆಲವು ಕಡೆ ಪಾದಚಾರಿ ಮಾರ್ಗಗಳು ಉತ್ತಮ ಸ್ಥಿತಿಯಲ್ಲಿಲ್ಲ. ಕೆಲವೆಡೆ ಪಾದಚಾರಿಗಳಿ‌ಗಾಗಿ ಪ್ರತ್ಯೇಕ ಮಾ‌ರ್ಗವೇ ಇಲ್ಲ. ಇದರಿಂದ ಜನಸಾಮಾನ್ಯರು ರಸ್ತೆಯಲ್ಲಿಯೇ ಓಡಾಡಬೇಕಿದೆ.

ಪುರಸಭೆಯು ಅಗತ್ಯ ಇರುವ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು. ಒತ್ತುವರಿ ಆಗಿರುವ ಕಡೆ ತೆರವುಗೊಳಿಸಬೇಕು ಎಂಬುದು ಪಟ್ಟಣದ ನಿವಾಸಿಗಳ ಆಗ್ರಹ.

‘ಪೊಲೀಸರೊಂದಿಗೆ ಚರ್ಚಿಸಿ ಕ್ರಮ’

ಪಾದಚಾರಿ ಹಾಗೂ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಇವುಗಳ ಅನ್ವಯ, ಈಗಾಗಲೇ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗುಂಡ್ಲುಪೇಟೆ ಪುರಸಭೆಯ ಮುಖ್ಯಾಧಿಕಾರಿ ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಥಳ ಗುರುತಿಸಿ ಕೊಡಿ’

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗುಂಡ್ಲುಪೇಟೆ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಲತೇಶ್‌ ಕುಮಾರ್ ಅವರು, ‘ವಾಹನಗಳ ನಿಲುಗಡೆಗಾಗಿ ಪುರಸಭೆ ಆಡಳಿತ ಸ್ಥಳವನ್ನು ನಿಗದಿ ಮಾಡಬೇಕು. ಸೂಕ್ತವಾದ ಜಾಗವನ್ನು ಗುರುತಿಸಿಕೊಂಡುವಂತೆ ತಹಶೀಲ್ದಾರ್‌ ಹಾಗೂಪುರಸಭೆ ಮುಖ್ಯಾಧಿಕಾರಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅವರು ಜಾಗ ನೀಡಿದರೆ, ಅದನ್ನು ನಿರ್ವಹಣೆ ಮಾಡುತ್ತೇವೆ’ ಎಂದು ಹೇಳಿದರು.

ಜನರ ಅಭಿಪ್ರಾಯಗಳೇನು?

ಸಂಚಾರ ನಿಯಮ ಪಾಲಿಸುತ್ತಿಲ್ಲ

ದೇವರಾಜು ಅರಸು ಕ್ರೀಡಾಂಗಣ, ಅಂಚೆಕಚೇರಿ ಬಳಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುತ್ತಾರೆ. ಪಟ್ಟಣದಲ್ಲಿ ಬಹುತೇಕರು ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಬೇರೆ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲ. ವಾಹನಗಳನ್ನು ಶಿಸ್ತುಬದ್ಧವಾಗಿ ಚಾಲನೆ ಮಾಡಬೇಕು.ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು

–ಮೋಹನ್, ಪಟ್ಟಣದ ನಿವಾಸಿ

***

ಇಚ್ಛಾಶಕ್ತಿಯ ಕೊರತೆ

ಪಾರ್ಕಿಂಗ್ ಸಮಸ್ಯೆ ಬಗ್ಗೆ ಪುರಸಭೆಗೆ ಅನೇಕ ದೂರುಗಳು ಬಂದಿವೆ. ಇದನ್ನು ಪರಿಹರಿಸಲುಪೊಲೀಸರು ಮತ್ತು ಪುರಸಭೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಆದರೆ, ಇಬ್ಬರ ನಡುವೆಯೂ ಸಂವಹನದ ಕೊರತೆ ಇದೆ. ಹಾಗಾಗಿ, ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಸಾರ್ವಜನಿಕರಿಗೆ ಒಳಿತು ಮಾಡುವ ಇಚ್ಛಾಶಕ್ತಿ ಅಧಿಕಾರಿಗಳಲ್ಲಿ ಇಲ್ಲ.

–ಅಬ್ದುಲ್ ಮಲಿಕ್, ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ

***

ಸ್ಥಳ ನಿಗದಿ ಮಾಡಿ

ದಂಡವಸೂಲಿಗೆ ಮಾತ್ರ ಪೊಲೀಸರು ನಿಲ್ಲುತ್ತಾರೆ. ವಾಹನ ಸವಾರರ ಮೇಲೆ ನಿಗಾ ಇಡಲು ಸಂಚಾರ ಪೊಲೀಸರು ಇಲ್ಲದ ಕಾರಣ ಸಾರ್ವಜನಿಕರಿಗೆ ಭಯವಿಲ್ಲ. ಊಟಿ ಗೇಟಿನಿಂದ ವಿಜಯಾ ಬ್ಯಾಂಕ್‌ವರೆಗೆ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಬೆಳಿಗ್ಗೆ ಮತ್ತು ಸಂಜೆ ಸಮುಯದಲ್ಲಿ ತೊಂದರೆಯಾಗುತ್ತಿದೆ. ವಾಹನ ನಿಲುಗಡೆಗಾಗಿ ಸೂಕ್ತ ಸ್ಥಳಾವಕಾಶ‌ಬೇಕು

–ಸಂಪತ್ತು, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT