ಚಾಮರಾಜನಗರ: ಹೊಂಡ ಗುಂಡಿಗಳಿಂದಾಗಿ ವಾಹನಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿ ತಲುಪಿದ್ದ, ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳಿಪುರದಿಂದ ಪುಣಜನೂರುವರೆಗಿನ ರಸ್ತೆಯನ್ನು ದುರಸ್ತಿ ಕೆಲಸ ಗುರುವಾರ ಆರಂಭವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಮೂಲಕ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಆರಂಭಿಸಿದ್ದಾರೆ. 8 ರಿಂದ 12 ದಿನಗಳೊಳಗೆ ರಸ್ತೆಯನ್ನು ದುರಸ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಬುಧವಾರ ಹೇಳಿದ್ದರು.
ಅಲ್ಲದೇ ಖುದ್ದಾಗಿ ರಸ್ತೆಯ ದುಃಸ್ಥಿತಿಯನ್ನೂ ಪರಿಶೀಲನೆ ನಡೆಸಿದ್ದರು. ತಕ್ಷಣವೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದರು.
ಮಣ್ಣು ಹಾಕಿದರೆ ಸಾಲದು: ‘ಗುಂಡಿಗಳಿಗೆ ಮಣ್ಣು ಮುಚ್ಚುವುದರಿಂದ ಏನೂ ಪ್ರಯೋಜನವಾಗದು, ಮಳೆಗೆ ಮತ್ತೆ ಮೊದಲಿನ ಸ್ಥಿತಿಯೇ ಆಗಲಿದೆ. ಗುಂಡಿಗಳಿಗೆ ವ್ಯವಸ್ಥಿತವಾಗಿ ಜಲ್ಲಿ ಟಾರು ಹಾಕಿ ಮುಚ್ಚಬೇಕು’ ಎಂದು ಸಾರ್ವಜನಿಕರು, ವಾಹನಗಳ ಚಾಲಕರು ಹೇಳಿದ್ದಾರೆ.