ಚಾಮರಾಜನಗರ: ಕೆಲವು ವಾರಗಳಿಂದ ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಬೆಲೆ ಈ ವಾರ ಇಳಿಕೆ ಕಂಡಿದೆ. ಕ್ಯಾರೆಟ್ ಹಾಗೂ ಬೀನ್ಸ್ ಧಾರಣೆಯೂ ಕುಸಿದಿದೆ.
ಹಾಪ್ಕಾಮ್ಸ್ನಲ್ಲಿ ಕಳೆದ ವಾರ ಕೆಜಿ ಈರುಳ್ಳಿ ಬೆಲೆ ₹80 ಇತ್ತು. ಈ ವಾರ ₹20 ಕಡಿಮೆಯಾಗಿದೆ. ದಿನಸಿ ಅಂಗಡಿಗಳಲ್ಲೂ ₹60ರಿಂದ ₹65ಕ್ಕೆ ಈರುಳ್ಳಿ ಸಿಗುತ್ತಿದೆ.
ನಾಲ್ಕು ವಾರಗಳಿಂದ ಕ್ಯಾರೆಟ್ ಬೆಲೆ ₹60 ಇತ್ತು. ಈ ವಾರ ₹20 ಕಡಿಮೆಯಾಗಿದ್ದು, ಸೋಮವಾರ ₹40ಕ್ಕೆ ಮಾರಾಟವಾಗುತ್ತಿತ್ತು. ಬೀನ್ಸ್ ಬೆಲೆ ಮತ್ತೆ ₹10 ಕಡಿಮೆಯಾಗಿ, ಕೆಜಿಗೆ ₹20ಕ್ಕೆ ಸಿಗುತ್ತಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
‘ವಾರದಿಂದೀಚೆಗೆ ಮಾರುಕಟ್ಟೆಗೆ ಈರುಳ್ಳಿಯ ಆವಕ ಹೆಚ್ಚಾಗುತ್ತಿದ್ದು, ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ಇದರಿಂದಾಗಿ ಬೆಲೆ ಕುಸಿದಿದೆ. ಕ್ಯಾರೆಟ್ ಹಾಗೂ ಬೀನ್ಸ್ ಕೂಡ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ಧಾರಣೆ ಕುಸಿದಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಣ್ಣುಗಳ ಪೈಕಿ ಮೂಸಂಬಿ ಬೆಲೆ ಕೆಜಿಗೆ ₹20 ಹೆಚ್ಚಾಗಿದೆ. ಕಳೆದ ವಾರದವರೆಗೆ ₹60 ಇತ್ತು. ಸೋಮವಾರ ₹80 ಇತ್ತು. ಪಚ್ಚೆ ಬಾಳೆಹಣ್ಣಿನ ಬೆಲೆ ಸ್ವಲ್ಪ ಕುಸಿತ ಕಂಡಿದೆ. ಕೆಜಿಗೆ ₹20 ಆಗಿದೆ.
ಎರಡು –ಮೂರು ದಿನದಲ್ಲಿ ಹೆಚ್ಚಳ: ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಈ ವಾರಾಂತ್ಯ ದೀಪಾವಳಿ ಹಬ್ಬ ಇರುವುದರಿಂದ ಬೆಲೆ ಏರಿಕೆಯಾಗುವುದು ಖಚಿತ ಎಂದು ಹೇಳುತ್ತಾರೆ ವ್ಯಾಪಾರಿಗಳು.
‘ಸದ್ಯ ಕನಕಾಂಬರ ಕೆಜಿಗೆ ₹400, ಕಾಕಡಕ್ಕೆ ₹60, ಚೆಂಡು ಹೂವು ₹10, ಸುಗಂಧ ರಾಜದ ಬೆಲೆ ಕೆಜಿಗೆ ₹20 ಇದೆ. ಇನ್ನು ಎರಡು ಮೂರು ದಿನ ಇದೇ ಬೆಲೆ ಇರಲಿದೆ. ದೀಪಾವಳಿ ಸಮಯದಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ಧಾರಣೆಯೂ ಏರಿಕೆ ಕಾಣಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಹೇಳಿದರು.
ಮಾಂಸಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೊಟ್ಟೆಯ ಬೆಲೆ ಮಾತ್ರ ಕುಸಿದಿದೆ. ಕಳೆದ ವಾರ ಸಗಟು ಮಳಿಗೆಗಳಲ್ಲಿ ₹520ರಷ್ಟಿದ್ದ 100 ಮೊಟ್ಟೆಗಳ ಬೆಲೆ ₹457ಕ್ಕೆ ಕುಸಿದೆ.
‘ಬೇಡಿಕೆಗೆ ಅನುಗುಣವಾಗಿ ಬೆಲೆ ನಿಗದಿಯಾಗುತ್ತಿದ್ದು, ಸದ್ಯ ಬೇಡಿಕೆ ಕಡಿಮೆ ಇದೆ’ ಎಂದು ಮೊಟ್ಟೆ ವ್ಯಾಪಾರಿ ನವೀನ್ ಅವರು ಹೇಳಿದರು.