ಕೊಳ್ಳೇಗಾಲ: ನಗರ, ತಾಲ್ಲೂಕು ವ್ಯಾಪ್ತಿಯಲ್ಲಿ ಟಿಪ್ಪರ್ಗಳ ಹಾವಳಿ ಹೆಚ್ಚಾಗಿದ್ದು, ಹಗಲು ರಾತ್ರಿ ಎನ್ನದೆ ಟಿಪ್ಪರ್ಗಳಲ್ಲಿ ಮಿತಿಗಿಂತ ಹೆಚ್ಚು ಲೋಡು ತುಂಬಿಸಿಕೊಂಡು ಎಂ.ಸ್ಯಾಂಡ್, ಮರಳು, ಜಲ್ಲಿ ಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಾದ್ಯಂತ ಗಣಿಕಾರಿಕೆ ನಡೆಯುತ್ತಿದೆ. ಹಾಗಾಗಿ, ಕರಿಕಲ್ಲು, ಬಿಳಿಕಲ್ಲುಗಳ ಸಾಗಾಣಿಕೆ ಹೆಚ್ಚು. ಇದರೊಂದಿಗೆ ಕ್ರಷರ್ಗಳಿಂದ ಎಂ.ಸ್ಯಾಂಡ್ ಸಾಗಣೆಯೂ ನಡೆಯುತ್ತಿದೆ. ಮಣ್ಣು, ಮರಳು ಸಾಗಣೆಯನ್ನೂ ಮಾಡಲಾಗುತ್ತಿದೆ.
ಟಿಪ್ಪರ್ಗಳಲ್ಲಿ ಮಿತಿಗಿಂತ ಹೆಚ್ಚು ಭಾರ ಹಾಕಿ ಸಾಗಣೆ ಮಾಡುವುದು ಒಂದೆಡೆಯಾದರೆ, ಮೇಲು ಹೊದಿಕೆ ಹಾಕದಿರುವುದರಿಂದ ಟಿಪ್ಪರ್ಗಳು ಸಾಗುವಾಗ ದೂಳು ಹಾರಿ ಸಾರ್ವಜನಿಕರಿಗೆ, ಇತರ ಸವಾರರಿಗೆ ಕಿರಿ ಕಿರಿಯಾಗುತ್ತಿದೆ. ವೇಗವಾಗಿ ಸಾಗುವುದರಿಂದ ಅಪಘಾತದ ಆತಂಕವನ್ನೂ ಜನರನ್ನು ಕಾಡುತ್ತಿದೆ.
ನಿಯಮಾವಳಿ ಪ್ರಕಾರ ನಾಲ್ಕು ಚಕ್ರದ ವಾಹನದಲ್ಲಿ 12 ಟನ್, ಆರು ಚಕ್ರದ ವಾಹನಗಳಲ್ಲಿ 16 ಟನ್, 10 ಚಕ್ರದ ವಾಹನಗಳಲ್ಲಿ ಗರಿಷ್ಠ 25 ಟನ್ ಭಾರ ಹಾಕಬಹುಹುದು. ಆದರೆ, ತಾಲ್ಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತದೆ. 10 ಚಕ್ರ ಹಾಗೂ 12 ಚಕ್ರಗಳ ಟಿಪ್ಪರ್ಗಳಲ್ಲಿಯೇ 35 ರಿಂದ 40 ಟನ್ಗಳಷ್ಟು ಎಂ– ಸ್ಯಾಂಡ್, ಮರಳು, ಮಣ್ಣುಗಳನ್ನು ಸಾಗಣೆ ಮಾಡಲಾಗುತ್ತಿದೆ.
‘ಟಿಪ್ಪರ್ಗಳ ವೇಗಕ್ಕೆ ಕಡಿವಾಣ ಇಲ್ಲದಂತಾಗಿದೆ. ಶಾಲಾ ಕಾಲೇಜು ಹಾಗೂ ಜನಸಂದಣಿ ಪ್ರದೇಶದಲ್ಲಿ ಕರ್ಕಶ ಶಬ್ದದ ಹಾರ್ನ್ ಮಾಡಿ ಹೋಗುತ್ತಿದ್ದಾರೆ. ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ನ್ಯಾಯಾಲಯ , ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಹಾರ್ನ್ ಹಾಕುವಂತಿಲ್ಲ. ಹಾಗಿದ್ದರೂ, ಹಾರ್ನ್ ಮಾಡುವುದನ್ನು ಚಾಲಕರು ನಿಲ್ಲಿಸುವುದಿಲ್ಲ. ಇದರಿಂದ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಮುಖಂಡ ಈಶ್ವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ರಾತ್ರಿ ದಂಧೆ ಹೆಚ್ಚು: ರಾತ್ರಿ ಹೊತ್ತಿನಲ್ಲಿ ಟಿಪ್ಪರ್ಗಳ ಓಡಾಟ ಹೆಚ್ಚಾಗಿದೆ. ಧನಗೆರೆ, ಬಸ್ತಿಪುರ, ಮುಳ್ಳೂರು, ಸರಗೂರು, ಸತ್ತೇಗಾಲ, ಹ್ಯಾಂಡ್ ಪೋಸ್ಟ್, ತೇರಂಬಳ್ಳಿ ಕುಂತೂರು ಸೇರಿದಂತೆ ಅನೇಕ ಭಾಗದಲ್ಲಿ ಮಣ್ಣು ಸಾಗಣೆಗೆ ರಾತ್ರಿಯಾಗುವುದನ್ನೇ ಕಾಯಲಾಗುತ್ತದೆ. ಮಣ್ಣನ್ನು ಟಿಪ್ಪರ್ಗಳಲ್ಲಿ ರಾತ್ರೋರಾತ್ರಿ ಸಾಗಿಸುತ್ತಿದ್ದಾರೆ.
‘ಎಲ್ಲಿಗೆ ಸಾಗಾಣೆ ಮಾಡಲಾಗುತ್ತಿದೆ ಎಂದು ಕೇಳಿದರೆ, ‘ಜಮೀನಿನಲ್ಲಿ ಪರವಾನಗಿ ಪಡೆದುಕೊಂಡಿದ್ದೇವೆ. ನಮ್ಮ ಮಣ್ಣನ್ನು ಬೇರೆ ಜಮೀನಿಗೆ ಸಾಗಿಸುತ್ತಿದ್ದೇವೆ’ ಎಂದು ಸಬೂಬು ಹೇಳಿ ಹೇಳುತ್ತಿದ್ದಾರೆ. ಇಲ್ಲಿನ ಮಣ್ಣನ್ನು ಬೇರೆ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಅಧಿಕಾರಿಗಳಂತೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಧನಗೆರೆ ಗ್ರಾಮದ ಮಹದೇವು ದೂರಿದರು.
ಪರವಾನಗಿ ಇಲ್ಲದೆ ಮರಳು ಎಂ–ಸ್ಯಾಂಡ್ ಮಣ್ಣು ಸಾಗಣೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು
-ಮಂಜುಳಾ ತಹಶೀಲ್ದಾರ್
ಟಾರ್ಪಲ್ ಮುಚ್ಚದೆ ಸಾಗಾಟ
ಬೆಳಗಿನ ಜಾವ 5ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಹೆಚ್ಚಾಗಿ ಎಂ ಸ್ಯಾಂಡ್ ತುಂಬಿಕೊಂಡು ಬರಲಾಗುತ್ತಿದೆ. ಟಿಪ್ಪರ್ನ ಬಾಡಿ ಮಟ್ಟಕ್ಕಿಂತಲೂ ಎತ್ತರಕ್ಕೆ ಎಂ–ಸ್ಯಾಂಡ್ ತುಂಬಲಾಗುತ್ತದೆ. ಇವುಗಳಿಗೆ ಮೇಲು ಹೊದಿಕೆ ಅಥವಾ ಟಾರ್ಪಲ್ ಹಾಕುವುದಿಲ್ಲ. ಟಿಪ್ಪರ್ಗಳು ವೇಗವಾಗಿ ಸಾಗುವ ರಭಸಕ್ಕೆ ಎಂ– ಸ್ಯಾಂಡ್ ಗಾಳಿಗೆ ತೂರಿ ರಸ್ತೆಗೆ ಬೀಳುತ್ತಿದೆ. ಲಾರಿಯ ಹಿಂದೆ ಸಾಗುವ ವಾಹನ ಸವಾರರು ಅದರಲ್ಲೂ ದ್ವಿಚಕ್ರವಾಹನ ಸವಾರರು ಬೆಳಿಗ್ಗೆ ರಸ್ತೆಗಳಲ್ಲಿ ವಾಯುವಿಹಾರ ನಡೆಸುವವರು ತೊಂದರೆ ಅನುಭವಿಸುತ್ತಿದ್ದಾರೆ. ನಿಯಮದ ಪ್ರಕಾರ ಟಿಪ್ಪರ್ನಲ್ಲಿ ಎಂ–ಸ್ಯಾಂಡ್ ಮಣ್ಣು ಮರಳು ಜಲ್ಲಿಕಲ್ಲು ತುಂಬಿಕೊಂಡು ಬರುವವರು ಟಾರ್ಪಲ್ ಮುಚ್ಚಿಕೊಂಡು ಬರಬೇಕು. ಆದರೆ ಯಾರೂ ಇದನ್ನು ಮಾಡುವುದಿಲ್ಲ. ಜೊತೆಗೆ ತಿರುವಿನಲ್ಲಿ ವೇಗವಾಗಿ ಓಡಿಸುವುದರಿಂದ ಎಂ–ಸ್ಯಾಂಡ್ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಬೀಳುತ್ತವೆ. ಮರಳು ಜಲ್ಲಿಕಲ್ಲಿನ ಮೇಲೆ ಸಾಗಿ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಪೊಲೀಸರು ಮತ್ತು ಆರ್ಟಿಒ ಅಧಿಕಾರಿಗಳು ಭಾರದ ಮಿತಿಯ ನಿಯಮ ಮೀರಿ ಸಾಗಾಣಿ ಮಾಡುತ್ತಿರುವ ಟಿಪ್ಪರ್ಗಳು ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪ್ರಗತಿಪರ ಹೋರಾಟಗಾರ ತೇಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಿಮಯ ಉಲ್ಲಂಘಿಸಿದರೆ ಕಠಿಣ ಕ್ರಮ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧರ್ಮೇಂದ್ರ ‘ಈ ವಿಚಾರವಾಗಿ ಕ್ರಮ ಕೈಗೊಳ್ಳುವ ಸಂಬಂಧ ಈಗಾಗಲೇ ಸರ್ಕಲ್ ಇನ್ಸ್ಪೆಕ್ಟರ್ಗಳು ಹಾಗೂ ಪಿಎಸ್ಐಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಆರ್ಟಿಒ ಇಲಾಖೆಗೂ ಪತ್ರ ಬರೆಯಲಾಗಿದೆ. ಅನುಮತಿ ಇಲ್ಲದೆ ನಿಯಮ ಪಾಲಿಸದೆ ಎಂ–ಸ್ಯಾಂಡ್ ಮರಳು ಮಣ್ಣು ಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಂಡವನ್ನೂ ವಿಧಿಸಲಾಗುವುದು’ ಎಂದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.