ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಲಸಿಕೆ ಹಾಕಿಸಲು ಮಾಲೀಕರ ಹಿಂದೇಟು!

ಕಾಲುಬಾಯಿ ಜ್ವರಕ್ಕೆ ಲಸಿಕಾಕರಣ: ಅಲ್ಲಲ್ಲಿ ಮತ್ತೆ ಕಾಣಿಸುತ್ತಿದೆ ಚರ್ಮಗಂಟು
Published 6 ಅಕ್ಟೋಬರ್ 2023, 5:37 IST
Last Updated 6 ಅಕ್ಟೋಬರ್ 2023, 5:37 IST
ಅಕ್ಷರ ಗಾತ್ರ

ಯಳಂದೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯು ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಂಡಿದೆ. ತಾಲ್ಲೂಕಿನಲ್ಲೂ ಪ್ರತಿದಿನ ಮುಂಜಾನೆಯಿಂದ ಲಸಿಕಾ ಅಭಿಯಾನ ನಡೆಯುತ್ತಿದೆ. ಆದರೆ, ಗ್ರಾಮಗಳಲ್ಲಿ ಹೈನುಗಾರರು ತಪ್ಪು ಕಲ್ಪನೆಗಳಿಂದ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ.

ಸೆ. 26 ರಿಂದ ಎತ್ತು, ಹೋರಿ, ಹಸು ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 10,885 ಜಾನುವಾರು ಇದ್ದು, ಮೂರು ಹಂತಗಳಲ್ಲಿ 4,230 ರಾಸುಗಳಿಗೆ ಲಸಿಕಾಕರಣ ನಡೆದಿದೆ. ಶೇ 100 ಸಾಧನೆ ಮಾಡುವ ನಿಟ್ಟಿನಲ್ಲಿ ಲಸಿಕೆ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಮಸ್ಥರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

‘ಹೊನ್ನೂರು, ಕೆಸ್ತೂರು ಮತ್ತು ಮದ್ದೂರು ಭಾಗಗಳ ಜಾನುವಾರುಗಳಿಗೆ ಲಸಿಕೆ ಪೂರ್ಣಗೊಂಡಿದೆ. ಆದರೆ, ಕೆಲವು ಗ್ರಾಮಗಳಲ್ಲಿ ಹಾಲು ನೀಡುವ ಹಸು, ಎಮ್ಮೆಗಳ ಮಾಲೀಕರು ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಾರೆ. ಲಸಿಕೆ ಹಾಕಿಸಿದರೆ ಹಾಲು ಕೊಡುವ ಹಸುವಿನ ಧಾರಣಾ ಸಾಮರ್ಥ್ಯ ಕುಗ್ಗುತ್ತದೆ. ಕನಿಷ್ಠ 1 ಲೀಟರ್ ಹಾಲು ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಅವರಲ್ಲಿ ಬೇರೂರಿದೆ. ಹೀಗಾಗಿ, ಕೆಲವರು ರೋಗ ಉಲ್ಭಣಗೊಂಡರೂ ಲಸಿಕೆ ಹಾಕಿಸಲು ಮುಂದಾಗುತ್ತಿಲ್ಲ’ ಎಂದು ಪಶು ವೈದ್ಯರು ಹೇಳಿದರು.

ಈ ಮಧ್ಯೆ, ತಾಲ್ಲೂಕಿನ ಕೆಲವು ಕಡೆಗಳಲ್ಲಿ ರಾಸುಗಳಲ್ಲಿ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.

‘ಹಸುವಿನ ಮೈಮೇಲೆ ಗಂಟುಗಳು ಮೂಡಿವೆ. ಮೂರು ದಿನಗಳಿಂದ ಚರ್ಮದ ಮೇಲಿನ ಗಂಟು ಹೆಚ್ಚಾಗುತ್ತಲೇ ಇದೆ. ಲಸಿಕೆ ಹಾಕಿಸಿಲ್ಲ. ಹಸುವಿಗೆ ಅನಾರೋಗ್ಯ ಕಾಡಿದೆ’ ಎಂದು ಮಲಾರಪಾಳ್ಯ ಶಿವಣ್ಣ ಹೇಳಿದರು.

ತಪ್ಪು ಕಲ್ಪನೆ ಬೇಡ: ‘ಜೂನ್-ಜುಲೈ ಆರಂಭದಿಂದ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಬಗ್ಗೆ ಮನಸ್ಸಿನಲ್ಲಿ ಇರುವ ತಪ್ಪು ಕಲ್ಪನೆಗಳಿಂದ ರೈತರು ಹೊರಬರಬೇಕು. ಲಸಿಕೆ ಹಾಕಿಸಿ ಜಾನುವಾರು ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಪಡೆಯುವುದು ಮುಖ್ಯ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ ಉಪ ನಿರ್ದೇಶಕ ಡಾ.ಎಲ್ ಹನುಮೇಗೌಡ ಹೇಳಿದರು. 

‘ರೋಗದ ತೀವ್ರತೆ ಇಲ್ಲ’

‘ತಾಲ್ಲೂಕಿನಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಲಸಿಕೆ ಪಡೆದ ರಾಸುಗಳಲ್ಲಿ ಯಾವುದೇ ರೋಗ ಕಂಡುಬಂದಿಲ್ಲ. ಪ್ರತಿ ಮುಂಜಾನೆ ಪಶು ವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ ಪಶು ಆರೋಗ್ಯ ತಪಾಸಣೆ ಮಾಡುತ್ತಾರೆ. ಕೃಷ್ಣಪುರ ಮತ್ತು ಕಾಡಂಚಿನ ಗುಂಬಳ್ಳಿ ಭಾಗಗಳ ರಾಸುಗಳಿಗೆ ಲಸಿಕೆ ನೀಡಬೇಕಿದೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ರೈತರ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಿದ್ದಾರೆ’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT