ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಕಾಡಿನ ನಡುವಿನ ಬಸವ ಕಾಡಿನ ಬಸಪ್ಪ ದೇವರಿಗೆ ಸೋಲಿಗರು ಶುಕ್ರವಾರ ಸಂಜೆ ಮಳೆ ಬೆಳೆ ಸಮೃದ್ಧಿಗಾಗಿ ಜೇನುತುಪ್ಪದ ಅಭಿಷೇಕ ನೆರವೇರಿಸಿದರು.
ಪ್ರತಿ ವರ್ಷ ಬಿಳಿಗಿರಿರಂಗನ ಜಾತ್ರೆ ಉತ್ಸವಕ್ಕೂ ಮುನ್ನ ಬೆಟ್ಟದಲ್ಲಿ ಮಳೆ ಸುರಿಯುವ ವಾಡಿಕೆ ಇದೆ. ಬಸಪ್ಪ ದೇವರ ಮೂಲ ವಿಗ್ರಹಕ್ಕೆ ಅರಿಸಿನ, ಕುಂಕುಮ ಹಾಕಿ ಕಾಡು ಹೂ ಮಾಲೆ ಅರ್ಪಿಸಿ, ಜೇನು ಹುಟ್ಟನ್ನು ಕಿತ್ತು ಮೂಲ ಮೂರ್ತಿಯ ಮೇಲೆ ಹಿಂಡಿದರು.
ಜೇನು ತುಪ್ಪವನ್ನು ವಿಗ್ರಹದ ತುಂಬಾ ಚೆಲ್ಲಿ ಅಭಿಷೇಕ ನೆರವೇರಿಸಿದರೆ ಕಾಡಿಗೆ ಸಮೃದ್ಧ ಮಳೆಯಾಗುತ್ತದೆ ಎಂಬ ನಂಬಿಕೆ ಸೋಲಿಗರದ್ದು.
‘ಪ್ರತಿ ವರ್ಷ ಏಪ್ರಿಲ್-ಮೇ ನಡುವೆ ಕನ್ನೇರಿ ಕಲೊನಿ ಮತ್ತು ಬಿಳಿಗಿರಿಬೆಟ್ಟದ ನಡುವಿನ ಕಾಡಿಗೆ ಬುಡಕಟ್ಟು ಜನರು ಮಿಂದು ಮಡಿ ಬಟ್ಟೆ ತೊಟ್ಟು ತೆರಳುತ್ತಾರೆ. ಇಲ್ಲಿನ ದೇವರಿಗೆ ಪೂಜೆ ನೆರವೇರಿಸುತ್ತಾರೆ. ಅರ್ಚನೆ ಮುಗಿದ ಮೂರು ದಿನಗಳಲ್ಲಿ ವರ್ಷಧಾರೆಯಾಗಿ ಕಾಡಿನ ಕೆರೆ-ಕಟ್ಟೆಗಳು ನೀರು ಪಡೆಯಲಿವೆ’ ಎಂದು ಬಂಗ್ಲೆಪೋಡಿನ ಬೊಮ್ಮಯ್ಯ ಹೇಳಿದರು.