ಚಾಮರಾಜನಗರ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಹತ್ಯೆ, ಹಿಂದೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಿ ಯುವಬ್ರಿಗೇಡ್ನ ಪದಾಧಿಕಾರಿಗಳು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಸೇರಿದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ ಬಾಂಗ್ಲಾದೇಶದ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಆಜಾದ್ ಹಿಂದೂ ಸೇನೆಯ ಜಿಲ್ಲಾಧ್ಯಕ್ಷ ಶಿವುವಿರಾಟ್ ಅವರು ಮಾತನಾಡಿ, ‘ಬಾಂಗ್ಲಾ ದೇಶದಲ್ಲಿ ವ್ಯವಸ್ಥಿತವಾಗಿ ದಾಳಿಗಳು ನಡೆಯುತ್ತಿವೆ. ಬಾಂಗ್ಲಾದಲ್ಲಿರುವ ಮತೀಯವಾದಿಗಳು ಹಿಂದೂಗಳನ್ನು ದೇಶದಿಂದ ಹೊರ ತಬ್ಬಲು ಇಂತಹ ಕುತಂತ್ರ ಮಾಡುತ್ತಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ದುರ್ಗಾದೇವಿ ಆರಾಧಕರಾದ ಹಿಂದೂಗಳು ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಸಮಯದಲ್ಲಿ ಪೆಟ್ರೋಲ್ ಬಾಂಬ್ ಹಾಕಿ ಸುಟ್ಟಿರುವುದು, ದೇವಸ್ಥಾನ ಧ್ವಂಸ ಮಾಡಿರುವುದು, ಹಿಂದೂಗಳ ಮನೆಗಳಿಗೆ ನುಗ್ಗಿ ಅವರ ಅಸ್ತಿಪಾಸ್ತಿ ನಷ್ಟ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕ್ರೌರ್ಯ ಮೆರೆಯುತ್ತಿದ್ದಾರೆ’ ಎಂದರು.
‘ಇಷ್ಟಾದರೂ ಅಲ್ಲಿನ ಸರ್ಕಾರ ಕೈಕಟ್ಟಿ ಕುಳಿದಿದೆ. ಇದರ ವಿರುದ್ಧ ಅಲ್ಲಿನ ಹಿಂದೂಗಳಿಗೆ ಅತ್ಮಸ್ಥೈರ್ಯ ತುಂಬುವ ಸಲುವಾಗಿ ಬೆಂಬಲ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ವಿಶ್ವ ಸಂಸ್ಥೆಯ ಮೂಲಕ ಬಾಂಗ್ಲಾದೇಶಕ್ಕೆ ಸ್ಪಷ್ಟ ಸೂಚನೆಯನ್ನು ಕೊಡಿಸಿ, ಹಿಂದೂಗಳ ಹತ್ಯೆಯನ್ನು ತಡೆಯಬೇಕು’ ಎಂದು ಆಗ್ರಹಿಸಿದರು.
ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಪ್ರವೀಣ್, ನಗರ ಸಂಚಾಲಕ ರಾಜು, ನಗರಸಭಾ ಮಾಜಿ ಸದಸ್ಯ ರಾಜೇಶ್, ಶಿವು, ಚಂದ್ರಶೇಖರ್, ಮಹೇಶ್, ಫೃಥ್ವಿ, ಚಂದ್ರು ಬುಲೆಟ್, ಹರೀಶ್, ಶೇಖರ್, ಮಧು, ಮಹೇಂದ್ರ, ನಾಗೇಂದ್ರ ಇತರರು ಇದ್ದರು.